ಲಕ್ನೋ: ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಶಾಸಕ, ಉನ್ನಾವ್ ಅತ್ಯಾಚಾರ ಪ್ರಕರಣದ ಅಪರಾಧಿ ಕುಲ್ದೀಪ್ಸಿಂಗ್ ಸೆಂಗರ್ ನ ಪತ್ನಿ ಸಂಗೀತಾಗೆ ಉತ್ತರ ಪ್ರದೇಶದ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ನೀಡಲಾಗಿದೆ.
ಉನ್ನಾವೊದ ಜಿಲ್ಲಾ ಪಂಚಾಯತ್ನ ಅಧ್ಯಕ್ಷೆಯಾಗಿದ್ದ ಸಂಗೀತಾ, ಫತೇಹ್ಪುರ ಚೌರಾಸಿ ತೃತಾಯ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಕುಲದೀಪ್ ಸಿಂಗ್ ಸೆಂಗರ್ ಬಿಜೆಪಿ ಶಾಸಕರಾಗಿದ್ದು, ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾದ ಬಳಿಕ ಪಕ್ಷದಿಂದ ಉಚ್ಚಾಟನೆಗೆ ಒಳಗಾಗಿದ್ದರು.
ಏನಿದು ಪ್ರಕರಣ?:
ಉತ್ತರ ಪ್ರದೇಶದ ಉನ್ನಾವೋದಲ್ಲಿ 2017ರಲ್ಲಿ ಯುವತಿಯನ್ನು ಅಪಹರಿಸಿ, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು.. ಈ ಪ್ರಕರಣದಲ್ಲಿ ಬಿಜೆಪಿ ಶಾಸಕನಾಗಿದ್ದ ಕುಲದೀಪ್ ಸೆಂಗಾರ್ ಜೊತೆಗೆ ಇನ್ನೂ ನಾಲ್ವರ ಹೆಸರು ಕೇಳಿಬಂದಿತ್ತು. ಆ ಆರೋಪಿಗಳು ಜಾಮೀನಿನ ಮೇಲೆ ಹೊರಬಂದಿದ್ದರು. ಕಳೆದ ವರ್ಷ ಯುವತಿ ಕೊಲೆಗೆ ಯತ್ನ ನಡೆದಿತ್ತು. ವಕೀಲರ ಜತೆ ಕೋರ್ಟ್ಗೆ ಹೋಗುತ್ತಿದ್ದಾಗ ಆಕೆಯ ಕಾರ್ಗೆ ಅಪಘಾತ ಮಾಡಿಸಲಾಗಿತ್ತು. ಈ ಅಪಘಾತದಲ್ಲಿ ವಕೀಲ ಮತ್ತು ಆಕೆಯ ಚಿಕ್ಕಪ್ಪ ಮೃತಪಟ್ಟಿದ್ದರು.
2018ರಿಂದಲೂ ಸಿಬಿಐ ಈ ಪ್ರಕರಣದ ತನಿಖೆ ನಡೆಸಿತ್ತು. ಆದರೆ, ರೇಪ್ ಸಂತ್ರಸ್ತೆಯ ಕುಟುಂಬದವರನ್ನು ನಾಶ ಮಾಡುವ ವ್ಯವಸ್ಥಿತ ಸಂಚು ನಡೆಯುತ್ತಿರುವ ಬೆನ್ನಲ್ಲೇ ಸುಪ್ರೀಂ ಕೋರ್ಟ್ ಈ ಪ್ರಕರಣದಲ್ಲಿ ಮಧ್ಯ ಪ್ರವೇಶ ಮಾಡಿತು. ಸಂತ್ರಸ್ತೆ ಮತ್ತಾಕೆಯ ಕುಟುಂಬ ಸದಸ್ಯರನ್ನು ವಾಯುಮಾರ್ಗದ ಮೂಲಕ ಉತ್ತರ ಪ್ರದೇಶದಿಂದ ಹೊರಗೆ ಕರೆ ತರಬೇಕೆಂದು ಸುಪ್ರೀಂ ಕೋರ್ಟ್ ಹೇಳಿತು. ನಂತರ ಈ ಪ್ರಕರಣದ ತನಿಖೆ ನಡೆಸಿದ್ದ ದೆಹಲಿ ಹೈಕೋರ್ಟ್ ಕುಲದೀಪ್ ಸಿಂಗ್ ಸೆಂಗಾರ್ಗೆ ಜೀವಾವಧಿ ಶಿಕ್ಷೆ ಘೋಷಿಸಿತು. ಹಾಗೇ, ಸಂತ್ರಸ್ತ ಯುವತಿಯ ಕುಟುಂಬಸ್ಥರಿಗೆ 10 ಲಕ್ಷ ರೂ. ಪರಿಹಾರ ನೀಡಲು ಸೂಚಿಸಿತು.