ಬಿಜಾಪುರ: ಛತ್ತೀಸ್ ಗಢದಲ್ಲಿ ನಕ್ಸಲರು ಅಪಹರಿಸಿದ್ದ ಕೋಬ್ರಾ ಜವಾನ್ ರಾಕೇಶ್ವರ್ ಸಿಂಗ್ ಮನ್ಹಸ್ ಅವರನ್ನು 100 ಗಂಟೆಗಳ ಬಳಿಕ ನಕ್ಸಲರು ಗುರುವಾರ ಬಿಡುಗಡೆಗೊಳಿಸಿದ್ದಾರೆ.
ಕಳೆದ ವಾರ ಛತ್ತೀಸ್ಗಢದ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲರು ನಡೆಸಿದ ದಾಳಿಗೆ 22 ಯೋಧರು ಹುತಾತ್ಮರಾಗಿ, ಹಲವು ಯೋಧರು ನಾಪತ್ತೆಯಾಗಿದ್ದರು. ಬಳಿಕ ಕೋಬ್ರಾ ಯುನಿಟ್ನ ಯೋಧರಾದ ರಾಕೇಶ್ವರ್ ಸಿಂಗ್ ಮನ್ಹಾಸ್ ಅವರನ್ನು ನಕ್ಸಲರು ಒತ್ತೆಯಾಳಾಗಿ ಇಟ್ಟುಕೊಂಡಿದ್ದರು ಇಂದು ಅವರನ್ನು ಬಿಡುಗಡೆ ಮಾಡಿದ್ದಾರೆ.
ಸ್ಥಳೀಯ ಪತ್ರಕರ್ತರು ಸೇರಿದಂತೆ 11 ಮಂದಿ ಸದಸ್ಯರ ತಂಡ ಮಾವೋವಾದಿಗಳ ಜೊತೆ ನಿರಂತರವಾಗಿ ಮಾತುಕತೆ ನಡೆಸಿ ರಾಕೇಶ್ವರ್ ಸಿಂಗ್ ಅವರನ್ನು ಬಿಡುಗಡೆ ಮಾಡಿಸುವಲ್ಲಿ ಯಶಸ್ವಿಯಾಗಿದೆ.
ರಾಕೇಶ್ವರ್ ಸಿಂಗ್ ಬಿಡುಗಡೆಗೆ ಪತ್ನಿ ಸಂತಸ:
ರಾಕೇಶ್ವರ್ ಸಿಂಗ್ ಮನ್ಹಾಸ್ ಅವರನ್ನು ನಕ್ಸಲ್ ಸಂಘಟನೆ ಬಿಡುಗಡೆ ಮಾಡುತ್ತಿದ್ದಂತೆ ಅವರ ಪತ್ನಿ ಮಿನು ಸ್ಥಳೀಯ ಮಾಧ್ಯಮದೊಂದಿಗೆ ಪ್ರತಿಕ್ರಿಯಿಸಿ, ಅವರು ಖಂಡಿತವಾಗಿಯೂ ವಾಪಸ್ ಬಂದೇ ಬರುತ್ತಾರೆ ಎಂದು ನಾನು ಬಹಳಷ್ಟು ಭರವಸೆಯನ್ನು ಇಟ್ಟುಕೊಂಡಿದ್ದೆನು. ಇಂದು ನನ್ನ ಪಾಲಿಗೆ ಅತೀವ ಸಂತೋಷದ ದಿನವಾಗಿದೆ. ಸರ್ಕಾರಕ್ಕೆ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.