ಉಗ್ರ ಪ್ರಕರಣಗಳಲ್ಲಿ ಸರಕಾರಿ ಅಭಿಯೋಜಕರಾಗಿದ್ದ ಉಜ್ವಲ್ ನಿಕಮ್ ಗೆ ಬಿಜೆಪಿ ಪಕ್ಷವು ಈ ಸಲ ಮುಂಬಯಿಒಯಿಂದ ಸ್ಪರ್ಧಿಸಲು ಟಿಕೆಟ್ ನೀಡಿದೆ.
ಮುಂಬಯಿ ಮೇಲಾದ ಭಯೋತ್ಪಾದಕ ದಾಳಿಯಲ್ಲಿ ಸಿಕ್ಕಿ ಬಿದ್ದಿದ್ದ ಪಾಕಿಸ್ಥಾನದ ಉಗ್ರ ಅಜ್ಮಲ್ ಕಸಬ್ನನ್ನು ಗಲ್ಲಿಗೇರಿಸಲು ವಾದ ಮಂಡಿಸಿದ್ದ ಸರಕಾರಿ ವಕೀಲ ಉಜ್ವಲ್ ನಿಕಮ್, ಮುಂಬಯಿ ಕಾಂಗ್ರೆಸ್ ಆಡಳಿತ ಕಾಲದಲ್ಲಾದ ಹಲವು ಭಯೋತ್ಪಾದಕ ದಾಳಿ ಪ್ರಕರಣಗಳು ಸೇರಿದಂತೆ ಅನೇಕ ಸೂಕ್ಷ್ಮ ಪ್ರಕರಣಗಳಲ್ಲಿ ಪೊಲೀಸರ ಪರವಾಗಿ ವಾದ ಮಂಡಿಸಿದ್ದರು. ಈ ಕಾರಣಕ್ಕೆ ಅವರಿಗೆ ಅನೇಕ ಸಲ ಜೀವ ಬೆದರಿಕೆ ಕೂಡ ಬಂದಿತ್ತು.
ಇದೀಗ ಲೋಕಸಭಾ ಚುನಾವಣೆಗೆ ಮುಂಬಯಿ ನಾರ್ತ್ ಸೆಂಟ್ರಲ್ ಕ್ಷೇತ್ರದಿಂದ ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲ್ ನಿಕಮ್ ಕಣಕ್ಕಿಳಿಯಲಿದ್ದಾರೆ. ಹಾಲಿ ಸಂಸದೆ ಪೂನಂ ಮಹಾಜನ್ ಅವರಿಗೆ ಪಕ್ಷ ಕೊಕ್ ನೀಡಿದೆ ಎಂದು ತಿಳಿದು ಬಂದಿದೆ.
ಬಿಜೆಪಿಯಿಂದ ಈ ನಿರ್ಧಾರವು ಕಾಂಗ್ರೆಸ್ ವರ್ಷಾ ಗಾಯಕ್ವಾಡ್ ಅವರನ್ನು ಮುಂಬಯಿ ಕ್ಷೇತ್ರದಿಂದ ಕಣಕ್ಕಿಳಿಸಿದ 48 ಗಂಟೆಗಳ ನಂತರ ಹೊರಬಿದ್ದಿದೆ. ಹಾಲಿ ಸಂಸದೆ ಪೂನಂ ಮಹಾಜನ್ ಅವರ ವಿರುದ್ಧ ಪಕ್ಷದಲ್ಲಿ ಅಸಮಾಧಾನ ವ್ಯಕ್ತವಾಗಿತ್ತು. ಅಲ್ಲದೆ ಮರಾಠಿ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಬಿಜೆಪಿಗೆ ಅನಿವಾರ್ಯವಾಗಿತ್ತು. ಈಗಾಗಲೇ ಮುಂಬಯಿ ಉತ್ತರ ಮತ್ತು ಮುಂಬಯಿ ಪೂರ್ವ ಸ್ಥಾನಗಳಿಗೆ ಕ್ರಮವಾಗಿ ಮರಾಠಿಯೇತರ ಪಿಯೂಷ್ ಗೋಯಲ್ ಮತ್ತು ಮಿಹಿರ್ ಕೋಟೆಚಾ ಅವರ ಹೆಸರನ್ನು ಘೋಷಿಸಿತ್ತು.