
ಕಡಬ: ತಾಲೂಕಿನ ಬಲ್ಯ ಗ್ರಾಮದ ಹೊಸಮಠದಿಂದ ಕೊಕ್ಕಡಕ್ಕೆ ಔಷಧಿ ತರಲು ಹೋದ 23 ವರ್ಷದ ಯುವತಿಯೊಬ್ಬರು ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ. ಹೊಸಮಠ ನಿವಾಸಿ, ಕೂಲಿ ಕಾರ್ಮಿಕ ತಿಮ್ಮಪ್ಪ ಅವರ ಪುತ್ರಿ ಐಶ್ವರ್ಯ (23) ನಾಪತ್ತೆಯಾದ ಯುವತಿ.
ಜುಲೈ 2 ರಂದು ಬೆಳಗ್ಗೆ ಎಂದಿನಂತೆ ಹೆತ್ತವರೊಂದಿಗೆ ಹೊಸಮಠಕ್ಕೆ ಕೆಲಸಕ್ಕೆ ತೆರಳಿದ್ದ ಐಶ್ವರ್ಯ, ಮಧ್ಯಾಹ್ನ ಬ್ಯಾಗ್ ಹಿಡಿದುಕೊಂಡು “ಕೊಕ್ಕಡಕ್ಕೆ ಔಷಧಿ ತರಲು ಹೋಗುತ್ತೇನೆ” ಎಂದು ಹೇಳಿ ತೆರಳಿದ್ದರು. ಆದರೆ ರಾತ್ರಿಯಾದರೂ ಅವರು ಮನೆಗೆ ಮರಳಿ ಬಂದಿಲ್ಲ. ಆತಂಕಗೊಂಡ ಪೋಷಕರು ಮೊಬೈಲ್ಗೆ ಕರೆ ಮಾಡಿದಾಗ ಫೋನ್ ‘ಸ್ವಿಚ್ ಆಫ್’ ಆಗಿರುವುದು ಕಂಡುಬಂದಿದೆ. ಸಂಬಂಧಿಕರು ಹಾಗೂ ಸ್ನೇಹಿತರ ಮನೆಗಳಲ್ಲಿ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಲಭ್ಯವಾಗಿಲ್ಲ.
ಈ ಕುರಿತು ಯುವತಿಯ ತಂದೆ ತಿಮ್ಮಪ್ಪ ನೀಡಿದ ದೂರಿನ ಮೇರೆಗೆ ಕಡಬ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಅಡಿ ಪ್ರಕರಣ (ಕ್ರೈಂ ಸಂಖ್ಯೆ: 82/2026) ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಯುವತಿಯ ಬಗ್ಗೆ ಯಾವುದೇ ಮಾಹಿತಿ ಸಿಕ್ಕಲ್ಲಿ ತಕ್ಷಣ ಕಡಬ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಕೋರಲಾಗಿದೆ.


