ಚಿಕ್ಕಮಗಳೂರು: ಮಹಾನಗರಿ ಮುಂಬೈನಲ್ಲಿ ಎಲೆಕ್ಟ್ರಿಷಿಯನ್ ಆಗಿ ಕಾರ್ಯನಿರ್ವಹಿಸುತ್ತಿರುವ ಗಂಡನಿಗೆ ಮೊಬೈಲ್ ನಲ್ಲೇ ತಲಾಖ್ ಹೇಳಿದ ಪತ್ನಿ ತನ್ನ ಮೂವರು ಮಕ್ಕಳು, ಪ್ರಿಯಕರನೊಂದಿಗೆ ನಾಪತ್ತೆಯಾಗಿರುವ ಘಟನೆ ಎನ್ಆರ್ ಪುರ ತಾಲೂಕು ಬಾಳೆಹೊನ್ನೂರಿನ ಲ್ಲಿ ನಡೆದಿದೆ.
ನಾಪತ್ತೆಯಾಗಿರುವ ಮಹಿಳೆ 10 ವರ್ಷಗಳ ಹಿಂದೆ ಹಲಸೂರು ರಸ್ತೆಯ ವ್ಯಕ್ತಿಯೊಂದಿಗೆ ಮದುವೆಯಾಗಿದ್ದಾರೆ. ದಂಪತಿಗೆ ಒಬ್ಬ ಪುತ್ರಿ ಹಾಗೂ ಮೂವರು ಪುತ್ರರಿದ್ದಾರೆ.
ಪತ್ನಿ ಮಕ್ಕಳನ್ನು ನೋಡಲು ಏಪ್ರಿಲ್ 7 ರಂದು ಪತಿ ಮುಂಬೈನಿಂದ ಊರಿಗೆ ಬರುವಾಗ ಕರೆ ಮಾಡಿದ ಪತ್ನಿ ತಲಾಕ್ ಕೇಳಿದ್ದಾರೆ. ದಿಢೀರ್ ತಲಾಖ್ ಕೇಳಿದ್ದರಿಂದ ಆತ ಕರೆ ಕಟ್ ಮಾಡಿದ್ದಾರೆ. ಏಪ್ರಿಲ್ 8 ರಂದು ಪತಿ ಮನೆಗೆ ಬರುವಷ್ಟರಲ್ಲಿ ತನ್ನ ಎರಡು ವರ್ಷದ ಇಬ್ಬರು ಪುತ್ರರು, ಮೂರೂವರೆ ವರ್ಷದ ಮಗಳೊಂದಿಗೆ ಪತ್ನಿ ನಾಪತ್ತೆಯಾಗಿದ್ದಾಳೆ. ಒಬ್ಬ ಪುತ್ರನನ್ನು ಮನೆಯಲ್ಲಿ ಬಿಟ್ಟು ಹೋಗಿದ್ದಾಳೆ.
ನಾಪತ್ತೆಗೆ ಮೊದಲು ಮಹಿಳೆಯ ಪತಿ, ಆಕೆಯ ಪೋಷಕರ ಮೊಬೈಲ್ ಗೆ ವಾಯ್ಸ್ ಮೆಸೇಜ್ ಕಳುಹಿಸಿರುವ ಮಹಿಳೆ ಗಂಡನನ್ನು ಉದ್ದೇಶಿಸಿ ಮಾತನಾಡಿ, ನೀವು ಒಳ್ಳೆಯವರು ಬೇರೆಯವರನ್ನು ಮದುವೆಯಾಗಿ ನಾನು ಇಷ್ಟಪಟ್ಟವರ ಜೊತೆ ಹೋಗುತ್ತೇನೆ ಎಂದು ತಿಳಿಸಿದ್ದಾರೆ. ಪತ್ನಿ ಮಕ್ಕಳು ನಾಪತ್ತೆಯಾಗಿದ್ದರಿಂದ ಕಂಗಾಲಾದ ಪತಿ ಬಾಳೆಹೊನ್ನೂರು ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆನ್ನಲಾಗಿದೆ.