
ಶಿವಮೊಗ್ಗ; ಸಾಹಸ ಮತ್ತು ಧೈರ್ಯಕ್ಕೆ ವಯಸ್ಸಿನ ಹಂಗಿಲ್ಲ ಎಂಬುದನ್ನು ಗೋರಗೋಡು ಗ್ರಾಮದ 4ನೇ ತರಗತಿ ವಿದ್ಯಾರ್ಥಿ ನಂದನ್ ಜೆ.ಸಿ. ತನ್ನ ಅದ್ಭುತ ಸಮಯಪ್ರಜ್ಞೆಯ ಮೂಲಕ ಸಾಬೀತುಪಡಿಸಿದ್ದಾನೆ!
ದಿನಗೂಲಿ ಕಾರ್ಮಿಕರಾದ ಚಂದ್ರು ಮತ್ತು ಗಾಯಿತ್ರಿ ದಂಪತಿಯ ಪುತ್ರನಾದ 9 ವರ್ಷದ ನಂದನ್, ತಂದೆಯೊಂದಿಗೆ ಹೊಳೆಯ ಬಳಿ ಹೋಗಿದ್ದಾಗ ಈ ಘಟನೆ ನಡೆದಿದೆ. ಚಂದ್ರು ಅವರಿಗೆ ಏಕಾಏಕಿ ಫಿಟ್ಸ್ ಬಂದು ನದಿಗೆ ಬಿದ್ದು ತೇಲಿ ಹೋಗುತ್ತಿದ್ದರು. ಇದನ್ನು ಕಂಡ ನಂದನ್ ಎದೆಗುಂದದೆ, ತಕ್ಷಣವೇ ದಡದಲ್ಲೇ ಓಡುತ್ತಾ ತಂದೆಯನ್ನು ಹುಡುಕಿದ್ದಾನೆ. ಬಳಿಕ ಸಮೀಪದ ಮನೆಗಳಿಗೆ ಧಾವಿಸಿ ಸ್ಥಳೀಯರ ನೆರವು ಕೋರಿದ್ದಾನೆ.
ನೀರಿನಲ್ಲಿ ತೇಲುತ್ತಿದ್ದ ಜರ್ಕಿನ್ ಆಧಾರದ ಮೇಲೆ ತಂದೆ ಎಲ್ಲಿದ್ದಾರೆ ಎಂಬುದನ್ನು ಸ್ಥಳೀಯರಿಗೆ ತೋರಿಸಿಕೊಟ್ಟಿದ್ದಾನೆ. ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯರು ಚಂದ್ರು ಅವರನ್ನು ನೀರಿನಿಂದ ಹೊರತೆಗೆದು ಪ್ರಥಮ ಚಿಕಿತ್ಸೆ ನೀಡಿ ಪ್ರಾಣ ಉಳಿಸಿದ್ದಾರೆ.
ಸಂಕಷ್ಟದ ಸಮಯದಲ್ಲಿ ಧೃತಿಗೆಡದೆ ತಂದೆಯನ್ನೇ ಸಾವಿನ ದವಡೆಯಿಂದ ಪಾರುಮಾಡಿದ ಈ ಪುಟ್ಟ ಹುಡುಗನ ಸಮಯಪ್ರಜ್ಞೆ, ಧೈರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.


