
ಸುರತ್ಕಲ್: ಚೊಕ್ಕಬೆಟ್ಟು ಮಠದ ಬಳಿ ರವಿವಾರ ತಡರಾತ್ರಿ ಭೀಕರ ಘಟನೆಯೊಂದು ನಡೆದಿದ್ದು, ಮಲಗಿದ್ದ ತಮ್ಮನ ತಲೆಗೆ ಕಲ್ಲು ಎತ್ತಿಹಾಕಿ ಅಣ್ಣನೇ ಕೊಲೆ ಮಾಡಿದ್ದಾನೆ.
ಕೊಲೆಯಾದ ಯುವಕನನ್ನು ಮೂಲತಃ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತೆಗ್ಯಾಳು ಗ್ರಾಮದ ಮಲ್ಲಿಕಾರ್ಜುನ (20) ಎಂದು ಗುರುತಿಸಲಾಗಿದ್ದು, ಆತನ ಅಣ್ಣ ಸೋಮನಾಥ್ (21) ಈ ಕೃತ್ಯವೆಸಗಿದ ಆರೋಪಿಯಾಗಿದ್ದಾನೆ. ಇವರು ಸದ್ಯ ಚೊಕ್ಕಬೆಟ್ಟು ಮಠದ ಬಳಿಯ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು.
ಈ ಸಹೋದರರು ತಮ್ಮ ತಾಯಿಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಆದರೆ, ತಾಯಿ ಇತ್ತೀಚೆಗಷ್ಟೇ ಕೊಪ್ಪಳಕ್ಕೆ ತೆರಳಿದ್ದರಿಂದ ಘಟನೆ ನಡೆದ ರಾತ್ರಿ ಮನೆಯಲ್ಲಿ ಇಬ್ಬರು ಮಾತ್ರ ಮಲಗಿದ್ದರು. ಬೆಳಗ್ಗೆ ಎದ್ದ ಆರೋಪಿ ಸೋಮನಾಥ್, “ನನ್ನ ತಮ್ಮ ಮಲಗಿದ್ದಲ್ಲಿಂದ ಏಳುತ್ತಿಲ್ಲ” ಎಂದು ನೆರೆಮನೆಯವರ ಬಳಿ ತಿಳಿಸಿದ್ದಾನೆ. ಆತನ ವರ್ತನೆಯಿಂದ ಅನುಮಾನಗೊಂಡ ಸ್ಥಳೀಯರು ಮನೆಯ ಮಾಲಕಿ ರೇಖಾ ಅವರಿಗೆ ವಿಷಯ ತಿಳಿಸಿದ್ದು, ತಕ್ಷಣವೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿದ ಕೂಡಲೇ ಸುರತ್ಕಲ್ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದಾಗ ಮಲ್ಲಿಕಾರ್ಜುನನ ತಲೆಗೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.
ಘಟನಾ ಸ್ಥಳಕ್ಕೆ ಡಿಸಿಪಿ ಮಿಥುನ್ ಎಚ್.ಎಂ., ಪಣಂಬೂರು ಎಸಿಪಿ ಶ್ರೀಕಾಂತ್ ಮತ್ತು ಸುರತ್ಕಲ್ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಶ್ವಾನದಳ, ಬೆರಳಚ್ಚು ತಜ್ಞರು ಹಾಗೂ ವಿಧಿವಿಜ್ಞಾನ ತಜ್ಞರ (FSL) ತಂಡವೂ ಸ್ಥಳಕ್ಕಾಗಮಿಸಿ ಸಾಕ್ಷ್ಯ ಸಂಗ್ರಹಿಸಿದೆ. ಸದ್ಯ ಆರೋಪಿ ಅಣ್ಣ ಸೋಮನಾಥ್ನನ್ನು ವಶಕ್ಕೆ ಪಡೆದಿರುವ ಸುರತ್ಕಲ್ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


