ಬೆಳ್ತಂಗಡಿ: ತಾಲೂಕಿನ ಬೆಳಾಲು ಗ್ರಾಮದ ಮಿನಂದೇಲಿನಲ್ಲಿ ಗುರುವಾರ (ಸೆ. 03) ರಾತ್ರಿ ಬೈಕ್ ಸವಾರರೊಬ್ಬರು ಕಾಡಾನೆಯೊಂದಕ್ಕೆ ಎದುರಾಗಿ, ಪವಾಡಸದೃಶವಾಗಿ ಅಪಾಯದಿಂದ ಪಾರಾದ ಘಟನೆ ನಡೆದಿದೆ.
ಉಜಿರೆ – ಬೆಳಾಲು – ಬಂದಾರು ಮುಖ್ಯರಸ್ತೆಯ ಮಿನಂದೇಲು ಡಿ.ಪಿ. ಸ್ಪೋರ್ಟ್ಸ್ ಕ್ಲಬ್ ಮೈದಾನದ ಪಕ್ಕದಲ್ಲಿರುವ ಬಸ್ ನಿಲ್ದಾಣದ ಬಳಿ ರಾತ್ರಿ ಸುಮಾರು 10:00 ರಿಂದ 10:30ರ ಅವಧಿಯಲ್ಲಿ ಈ ಘಟನೆ ಸಂಭವಿಸಿದೆ. ಬೈಕ್ ಚಾಲನೆ ಮಾಡುತ್ತಿದ್ದ ವೇಳೆ ದಿಢೀರನೆ ರಸ್ತೆ ಮಧ್ಯೆ ಕಾಡಾನೆ ಪ್ರತ್ಯಕ್ಷಗೊಂಡಿದ್ದು, ಆತಂಕಕ್ಕೊಳಗಾದ ಸವಾರ ತಕ್ಷಣವೇ ಚಾಕಚಕ್ಯತೆಯಿಂದ ಬೈಕ್ ನಿಯಂತ್ರಿಸಿ ಯಾವುದೇ ಅನಾಹುತವಿಲ್ಲದೆ ಪಾರಾಗಿದ್ದಾರೆ. ಘಟನೆಯ ಆಘಾತದಿಂದ ಸವಾರ ಗಲಿಬಿಲಿಗೊಂಡಿದ್ದರಿಂದ ಆನೆಯ ಫೋಟೋ ಅಥವಾ ವಿಡಿಯೋ ಚಿತ್ರೀಕರಿಸಲು ಸಾಧ್ಯವಾಗಿಲ್ಲ.
ವಿಷಯ ತಿಳಿಯುತ್ತಿದ್ದಂತೆಯೇ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅರಣ್ಯ ಇಲಾಖೆಯ ಮೂಲಗಳ ಪ್ರಕಾರ, ಆನೆಯು ಮಂಜನೊಟ್ಟಿನಿಂದ ಭಂಡಾರಿ ಮಜಲು ಮಾರ್ಗವಾಗಿ ರಾತ್ರಿ 1:35ರ ಸುಮಾರಿಗೆ ಮುಂಡೆತ್ಯಾರು ದಾಟಿ, ಕೆಳಗಿನ ಬೆಳಾಲಿನ ಕಡೆಗೆ ಸಂಚರಿಸಿದೆ ಎಂದು ತಿಳಿದುಬಂದಿದೆ.
ಸದರಿ ಪ್ರದೇಶದಲ್ಲೇ ಕಾಡಾನೆ ಬೀಡುಬಿಟ್ಟಿರುವ ಶಂಕೆ ಇರುವುದರಿಂದ ಸ್ಥಳೀಯ ಗ್ರಾಮಸ್ಥರು ಹಾಗೂ ರಾತ್ರಿ ವೇಳೆ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಜಾಗರೂಕರಾಗಿರಬೇಕೆಂದು ಅರಣ್ಯ ಇಲಾಖೆ ಸೂಚಿಸಿದೆ.


