ಭೋಪಾಲ್: ಮನೆಯಲ್ಲಿ ಚಪಾತಿ ತಿಂದ ಬಳಿಕ ನ್ಯಾಯಾಧೀಶ ಹಾಗೂ ಅವರ ಮಗ ಮೃತಪಟ್ಟಿರುವ ಘಟನೆ ಭೋಪಾಲ್ನ ಬೇತುಲ್ನಲ್ಲಿ ನಡೆದಿದೆ. ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಮಹೇಂದ್ರ ಕುಮಾರ್ ತ್ರಿಪಾಠಿ ಮತ್ತು ಅವರ ಮಗ ಮೃತಪಟ್ಟಿದ್ದಾರೆ. ಗೋಧಿಹಿಟ್ಟಿನಲ್ಲಿ ಏನೋ ವಿಷ ಬೆರೆತಿದ್ದ ಕಾರಣ, ಈ ಅನಾಹುತ ಸಂಭವಿಸಿರಬಹುದು ಎಂದು ಪ್ರಾಥಮಿಕ ವರದಿಗಳು ಹೇಳಿವೆ.
ಈ ಘಟನೆ ಕಳೆದ ವಾರ ನಡೆದಿದೆ. ರಾತ್ರಿ ಅಪ್ಪ ಮತ್ತು ಮಗ ಊಟ ಮಾಡಿದ್ದಾರೆ. ಊಟ ಮಾಡಿದ ಸ್ವಲ್ಪ ಸಮಯದಲ್ಲಿಯೇ ಇಬ್ಬರ ಆರೋಗ್ಯ ಹದಗೆಟ್ಟಿದೆ. ಪಾರ್ಶ್ವವಾಯು ಸಮಸ್ಯೆಯಿಂದ ಬಳಲುತ್ತಿದ್ದ ಮಹೇಂದ್ರಕುಮಾರ್ ಅವರು ಚಪಾತಿ ತಿಂದ ಬಳಿಕ ಬಹಳ ಅಸ್ವಸ್ಥರಾದ ಹಿನ್ನೆಲೆಯಲ್ಲಿ ಅವರನ್ನು ಹಾಗೂ ಮಗನನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಇಬ್ಬರಿಗೂ ವಿಪರೀತವಾಗಿ ವಾಂತಿ ಆಗಲು ಅರಂಭಿಸಿದೆ.
ಆಸ್ಪತ್ರೆಗೆ ಹೋದಾಗ ಫುಡ್ಪಾಯ್ಸನ್ ಆಗಿರಬಹುದು ಎಂದ ವೈದ್ಯರು ಕೆಲವೊಂದು ಮಾತ್ರೆಗಳನ್ನು ನೀಡಿದಿದ್ದಾರೆ. ಆದರೆ ಇಬ್ಬರ ಆರೋಗ್ಯವೂ ಹದಗೆಡುತ್ತಾ ಸಾಗಿದೆ. ಮಹೇಂದ್ರಕುಮಾರ ಅವರ ಆರೋಗ್ಯ ವಿಪರೀತ ಕ್ಷೀಣಿಸಿದಾಗ ಅವರನ್ನು ನಾಗ್ಪುರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಅವರು ಜುಲೈ 26ರಂದು ಮೃತಪಟ್ಟಿದ್ದಾರೆ.
ಇತ್ತ ಮಗನ ಸ್ಥಿತಿಯೂ ಚಿಂತಾಜನಕವಾಗಿತ್ತು. ಅಪ್ಪ ಸತ್ತ ಕೆಲವೇ ಹೊತ್ತಿನ ಬಳಿಕ ಅವರೂ ಮೃತಪಟ್ಟಿರುವುದಾಗಿ ಬೇತುಲ್ ಉಪವಿಭಾಗೀಯ ಪೊಲೀಸ್ ಅಧಿಕಾರಿ ವಿಜಯ್ ಪೂಂಜ್ ಮಾಹಿತಿ ನೀಡಿದ್ದಾರೆ. ಗೋಧಿಹಿಟ್ಟಿನಲ್ಲಿ ವಿಷಕಾರಿ ಅಂಶ ಇದ್ದ ಕಾರಣದಿಂದ ಸಾವು ಸಂಭವಿಸಿರಬಹುದು ಎಂದು ಮೇಲ್ಮೋಟಕ್ಕೆ ತಿಳಿದುಬರುತ್ತಿದೆ. ಆದರೆ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.