ಬಂಟ್ವಾಳ: ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಬೆಳ್ಳಿಹಬ್ಬ ಸಂಭ್ರಮ ಕಾರ್ಯಕ್ರಮವು ಮಾರ್ಚ್ 10ರಂದು ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಬಳಿ ನಡೆಯಲಿದ್ದು, ಈ ಸಮಾರಂಭದಲ್ಲಿ ಬಂಟ್ವಾಳ ತಾಲ್ಲೂಕಿನ 32 ವಲಯದ ಬಿಲ್ಲವ ಸಂಘಗಳಿಂದ ಸುಮಾರು 5 ಸಾವಿರ ಮಂದಿ ಪಾಲ್ಗೊಳ್ಳುವರು ಎಂದು ಮಹಾಮಂಡಲ ಜಿಲ್ಲಾ ವಕ್ತಾರ ಬೇಬಿ ಕುಂದರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ದೇಶದಲ್ಲಿ ಸುಮಾರು 275 ವಿವಿಧ ಹೆಸರಿನ ಬಿಲ್ಲವ ಸಂಘಟನೆಗಳು ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ವೇದಿಕೆಯಡಿ ಸೇರಲಿದ್ದು, ಅವಿಭಜಿತ ಜಿಲ್ಲೆಯಲ್ಲಿ ಒಂದು ಲೋಕಸಭಾ ಕ್ಷೇತ್ರ ಬಿಲ್ಲವರಿಗೆ ಮೀಸಲಿಡಬೇಕು ಎಂದು ಆಗ್ರಹಿಸಲಾಗುವುದು’ ಎಂದು ಬೇಬಿ ಕುಂದರ್ ತಿಳಿಸಿದರು.
ಸಮಾರಂಭದಲ್ಲಿ ದೇಶ ಮತ್ತು ವಿದೇಶದಲ್ಲಿ ನೆಲೆಸಿರುವ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ, ಪ್ರಶಸ್ತಿ ಪ್ರದಾನ ನಡೆಯಲಿದೆ. ಸಮಾವೇಶವನ್ನು ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಉದ್ಘಾಟಿಸಲಿದ್ದಾರೆ. ಮಹಾಮಂಡಲದ ಅಧ್ಯಕ್ಷ ರಾಜಶೇಖರ್ ಕೋಟ್ಯಾನ್, ಸೋಲೂರು ಮಠದ ಆರ್ಯ ಈಡಿಗ ಮಹಾ ಸಂಸ್ಥಾನ ಪೀಠಾಧಿಪತಿ ವಿಖ್ಯಾತಾನಂದ ಸ್ವಾಮೀಜಿ, ಕನ್ಯಾಡಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಕೇರಳ ಶಿವಗಿರಿ ಮಠದ ಸತ್ಯಾನಂದ ತೀರ್ಥ ಸ್ವಾಮೀಜಿ, ನಿಪ್ಪಾಣಿ ಮಹಾಕಾಳಿ ಮಹಾ ಸಂಸ್ಥಾನ ಪೀಠಾಧಿಪತಿ ಅರುಣಾನಂದ ಸ್ವಾಮೀಜಿ, ಕಣಿಯೂರು ಮಹಾಬಲೇಶ್ವರ ಸ್ವಾಮೀಜಿ, ಶಿಕ್ಷಣ ಸಚಿವ ಮಧು ಬಂಗಾರಪ್ಪ, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ಕೆ.ಹರೀಶ ಕುಮಾರ್, ಮಾಜಿ ಸಚಿವ ವಿ.ಸುನಿಲ್ ಕುಮಾರ್, ವಿನಯಕುಮಾರ್ ಸೊರಕೆ, ಕೆ.ವಸಂತ ಬಂಗೇರ, ಗೋಪಾಲ ಪೂಜಾರಿ ಭಾಗವಹಿಸುವರು ಎಂದರು.
ಸಮಿತಿ ಜಿಲ್ಲಾ ಘಟಕದ ಸಂಚಾಲಕ ಜಗದೀಶ ಕೊಯಿಲ, ಜಿಲ್ಲಾ ನಿರ್ದೇಶಕ ದಾಮೋದರ ಪೂಜಾರಿ ಸಿದ್ಧಕಟ್ಟೆ, ಯುವವಾಹಿನಿ ಘಟಕ ಅಧ್ಯಕ್ಷ ಹರೀಶ ಕೊಟ್ಯಾನ್ ಕುದನೆ, ಮಾಜಿ ಅಧ್ಯಕ್ಷ ಗಣೇಶ ಪೂಂಜರಕೋಡಿ, ಮಹಿಳಾ ಘಟಕದ ಅಧ್ಯಕ್ಷೆ ಶೈಲಜಾ ರಾಜೇಶ್ ಭಾಗವಹಿಸಿದ್ದರು.