ಬೆಂಗಳೂರು : ಕೋವಿಡ್ -19 ಅನ್ನೋ ಹೆಮ್ಮಾರಿ ಅದ್ಯಾವಾಗ ಈ ಜಗತ್ತಿಗೆ ಕಾಲಿಟ್ಟಿತೋ ಯಾರು ನಿರೀಕ್ಷೆ ಮಾಡಲಾಗದ ಅನಿರೀಕ್ಷಿತ ಘಟನೆಗಳೇ ನಡೆಯುತ್ತಿವೆ. ಒಂದು ಕಡೇ ಮಹಾನಗರಗಳಲ್ಲಿ ಶರ ವೇಗದಲ್ಲಿ ಏರುತ್ತಿದೆ ಕೊರೊನಾ ಸೋಂಕಿತರ ಸಂಖ್ಯೆ ಮತ್ತೊಂದು ಕಡೆ ಸಾವಿನ ಸುಳಿವೇ ಇಲ್ಲದೇ ಸಾವಿನ ಮನೆಯ ದಾರಿ ತೋರಿಸುತ್ತಿದೆ ಈ ಮಹಾಮಾರಿ.
ಮಾರ್ಚ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದಾದ್ಯಂತ ಲಾಕ್ ಡೌನ್ ಅಂತಾ ಘೋಷಣೆ ಮಾಡಿದ್ರೋ ಅದೆಷ್ಟೋ ವರ್ಷಗಳಿಂದ ಊರಿನ ಮುಖ ನೋಡದ ಮಂದಿಗೆ ಊರು ನೆನಪಾಯ್ತು. ಊರಿನ ಸಹವಾಸ ಬೇಡಪ್ಪಾ ಅಂತಾ ಊರು ಬಿಟ್ಟವರು ಗಂಟು ಮೂಟೆ ಕಟ್ಟಿಕೊಂಡು ಊರು ಸೇರಿದ್ರು. ಊರೇ ಸ್ವರ್ಗ ಅಂತಾ ಭಾಷಣ ಶುರು ಹಚ್ಕೊಂಡ್ರು. ಲಾಕ್ ಡೌನ್ ಯಾವಾಗ ರಿಲೀಸ್ ಆಯ್ತೋ ಮತ್ತೆ ಅದೇ ಸಿಟಿಯತ್ತ ಮುಖ ಮಾಡಿದ್ರು.
ಇದೀಗ ಯಾವಾಗ ಮತ್ತೆ ಮಹಾ ನಗರಗಳಲ್ಲಿ ಕೊರೊನಾ ಹಾವಳಿ ಜಾಸ್ತಿಯಾಯ್ತೋ ಮತ್ತೆ ಅದೆಷ್ಟೋ ಮಂದಿಗೆ ಊರು ನೆನಪಾಗ್ತಿದೆ. ಈ ನಗರಗಳ ಸಹವಾಸ ಬೇಡವೇ ಬೇಡ, ಊರಲ್ಲಿ ಗಂಜಿ ಕುಡ್ಕೊಂಡಾದ್ರೂ ಇರ್ತೀವಿ ಅಂತಾ ಊರು ಕಡೆಗೆ ಮುಖ ಮಾಡ್ತಿದ್ದಾರೆ. ಆದ್ರೆ ಯಾವಾಗ ಹೋದ್ರು ಬಾ ಅಂತಾ ಪ್ರೀತಿಯಿಂದ ಕರೆಯುತ್ತಿದ್ದ ಊರಿನ ಜನರೇ, ಇದೀಗ ಕಷ್ಟ ಇದೆ, ಬರ್ತೀವಿ ಅಂದ್ರೆ ಬರ್ಬೇಡಿ ಅಂತಿದ್ದಾರೆ. ಮನೆಯವರೇ ಬೇಡ ಬಂದ್ರೆ ತೊಂದರೆ ಅಂತಿದ್ದಾರೆ. ಬಂದ್ರೂ ಕ್ವಾರಂಟೈನ್ ಮುಗಿಸದೇ ಮನೆಗೆ ಪ್ರವೇಶವಿಲ್ಲ ಅಂತಾ ಹೇಳ್ತಿದ್ದಾರೆ. ಎಷ್ಟೋ ಹಳ್ಳಿಗಳಲ್ಲಿ ನಾವು ಬೆಂಗಳೂರಿನಿಂದ ಬಂದಿದ್ದೇವೆ, ಮುಂಬೈನಿಂದ ಬಂದಿದ್ದೇವೆ ಅಂದ್ರೆ ನೋ ಎಂಟ್ರಿ. ಒಂದು ಕಾಲದಲ್ಲಿ ನಮ್ಮ ಮಗನೋ, ಮಗಳೋ ಮುಂಬೈನಲ್ಲಿದ್ದಾನೆ, ಬೆಂಗಳೂರಿನಲ್ಲಿದ್ದಾಳೆ, ಇಲ್ಲ ಫಾರಿನ್ ನಲ್ಲಿ ಇದ್ದಾಳೆ ಅಂತಾ ಹೇಳೋದಕ್ಕೆ ಹೆಮ್ಮೆ ಪಡುತ್ತಿದ್ದ ಹೆತ್ತವರು, ನೀವು ಅಲ್ಲೇ ಇರಿ, ಸೇಫ್ ಆಗಿರಿ ಅಂತಾ ಹೇಳುತ್ತಾ ಪರೋಕ್ಷವಾಗಿ ಊರಿಗೆ ಬರ್ಬೇಡಿ ಅಂತಿದ್ದಾರೆ.
ಒಂದು ಕಡೆಯಿಂದ ನೋಡಿದ್ರೆ ಹಳ್ಳಿಗಳ ಜನ ಮಾಡ್ತಿರೋದು ಸರಿಯಾಗಿದೆ. ಮಹಾನಗರಗಳಲ್ಲಿ ಭಯಾನಕವಾಗಿ ಕೊರೊನಾ ಹಬ್ಬುತ್ತಿರುವ ಸಮಯದಲ್ಲಿ ಜನ ಹಳ್ಳಿಗಳ್ಳಿಗೆ ಬರೋದೆಷ್ಟು ಸರಿ ? ಪ್ರಶಾಂತವಾಗಿದ್ದ ಹಳ್ಳಿಗಳ ನೆಮ್ಮದಿಯನ್ನು ಯಾಕೆ ಕೆಡಿಸಬೇಕು.. ಹಾಗೇ ಒಂದು ವೇಳೆ ಬಂದರೂ ಸರಿಯಾಗಿ ಕ್ವಾರಂಟೈನ್ ಮಾಡದೇ ಊರಿಡಿ ಸುತ್ತಿ ಕಾಯಿಲೆ ಹಬ್ಬೋದ್ಯಾಕೆ? ನಮ್ಮ ಎಚ್ಚರಿಕೆಯಲ್ಲಿ ನಾವಿರೋಣ ಅಂತಾ ರಾಜ್ಯದ ಅದೆಷ್ಟೋ ಗ್ರಾಮಗಳನ್ನು ಜನರೇ ಸ್ವಯಂಪ್ರೇರಿತವಾಗಿ ಬಂದ್ ಮಾಡ್ಕೊಂಡಿದ್ದಾರೆ. ಹೊರಗಿನವರ ಪ್ರವೇಶಕ್ಕೆ ನಿಷೇಧ ಹೇರಿದ್ದಾರೆ. ಹಾಗಾಗಿ ಸದ್ಯ ಬಹುತೇಕ ನಗರವಾಸಿಗಳ ಪರಿಸ್ಥಿತಿ ನಗರಗಳು ಊರಿಗೆ ಹೋಗಿ ಅಂತಿವೆ. ಊರು ಬರ್ಬೇಡ ಅಂತಿದೆ ಅನ್ನೋ ಹಾಗಾಗಿದೆ.