ಬೆಂಗಳೂರು: ಸಂಜೀವಿನಿ ಆಸ್ಪತ್ರೆಯ ವೈದ್ಯರೊಬ್ಬರು ಮೂರು ವರ್ಷದ ಕಂದಮ್ಮನಿಗೆ ಅವಧಿ ಮೀರಿದ ಇಂಜಕ್ಷನ್ ನೀಡಿ ಆಸ್ಪತ್ರೆಯಲ್ಲಿ ದಾಖಲಾಗುವಂತೆ ಮಾಡಿದ್ದು, ಈ ಕುರಿತು ಆಸ್ಪತ್ರೆಯ ವಿರುದ್ಧ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಸಂಜೀವಿನಿ ಆಸ್ಪತ್ರೆಗೆ ಅನಾರೋಗ್ಯದ ನಿಮಿತ್ತ ಎರಡು ವರ್ಷದ ಯಾದ್ವಿ ಎಂಬ ಹೆಣ್ಣುಮಗುವನ್ನು ಪೋಷಕರು ಕೊಂಡೊಯ್ದಿದ್ದರು. ಮಗುವಿಗೆ ಜ್ವರ ಹೆಚ್ಚಾಗಿದ್ದರಿಂದ ವೈದ್ಯರು ಡ್ರಿಪ್ ಮೂಲಕ ಇಂಜೆಕ್ಷನ್ ನೀಡಿದ್ದರು. ಈ ವೇಳೆ ಮಗುವಿನ ಆರೋಗ್ಯದಲ್ಲಿ ಏರುಪೇರಾಗಿದ್ದು, ಕೂಡಲೇ ಬೇರೊಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎನ್ನಲಾಗಿದೆ.
ಇನ್ನು ಇದೇ ವೇಳೆ ಮಗುವಿನ ಪೋಷಕರಿಗೆ ಸಂಜೀವಿನಿ ಆಸ್ಪತ್ರೆಯ ಸಿಬ್ಬಂದಿಗಳು ಹಣದ ಆಮಿಷ ಒಡ್ಡಿದ್ದು, ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯ ವಿರುದ್ಧ ಮಗುವಿನ ತಂದೆ ಕಿರಣ್ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣದ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಈ ಘಟನೆಯ ಕುರಿತು ಪ್ರತಿಕ್ರಯಿಸಿದ ಸಂಜೀವಿನಿ ಆಸ್ಪತ್ರೆಯ ಮಕ್ಕಳ ತಜ್ಞೆ ಡಾ. ಸಹನ, ನಾವು ಕ್ಷಮೆ ಕೇಳುತ್ತೇವೆ. ಮಗುವಿಗೆ ಅವಧಿ ಮೀರಿದ ಚುಚ್ಚು ಮದ್ದು ಕೊಟ್ಟಿರುವುದು ನಿಜ ಎಂದು ಒಪ್ಪಿಕೊಂಡಿದ್ದಾರೆ. ಡ್ರಿಪ್ಸ್ನಿಂದ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿದೆ. ಸಂಬಂಧಪಟ್ಟ ಸಿಬ್ಬಂದಿಯನ್ನು ಅಮಾನುತುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಆಸ್ಪತ್ರೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಮಗುವಿನ ಪೋಷಕರು ಏರಿಯಾದ ಎಂಒಎಚ್ ಅವರಿಗೂ ಮಗುವಿನ ಪೋಷಕರು ದೂರು ನೀಡಿದ್ದರು.