
ಬೆಂಗಳೂರು ; ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ, ಜೈಲಿನ ನಿಯಮಾವಳಿ ಅನ್ವಯ ತಮಗೆ ವಹಿಸಲಾದ ಕೆಲಸಕ್ಕೆ ಹಾಜರಾಗದೆ ‘ಬಿಂದಾಸ್’ ಆಗಿ ಕಾಲ ಕಳೆಯುತ್ತಿದ್ದಾರೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ.
ಮನೆ ಕೆಲಸದಾಕೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ 2025ರ ಆಗಸ್ಟ್ ನಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಪ್ರಜ್ವಲ್, ಸಜಾ ಕೈದಿಯಾಗಿ ಜೈಲಿನಲ್ಲಿ ಶ್ರಮದಾನ ಮಾಡಬೇಕಿದೆ. ತಮ್ಮ ಕೌಶಲ್ಯಕ್ಕೆ ಅನುಗುಣವಾಗಿ ಅವರು ದಿನಕ್ಕೆ 520 ರೂಪಾಯಿ ಕೂಲಿ ಇರುವ ಗ್ರಂಥಾಲಯದ (ಲೈಬ್ರರಿ) ಸಹಾಯಕನ ಕೆಲಸವನ್ನು ತಾವೇ ಆಯ್ಕೆ ಮಾಡಿಕೊಂಡಿದ್ದರು. ಆದರೆ, ಆರಂಭದಲ್ಲಿ ಕೆಲವು ಗಂಟೆಗಳ ಕಾಲ ಮಾತ್ರ ಕೆಲಸಕ್ಕೆ ಹಾಜರಾಗಿದ್ದ ಅವರು, ಆನಂತರ ಗ್ರಂಥಾಲಯದ ಕಡೆ ಮುಖ ಮಾಡಿಲ್ಲ ಎನ್ನಲಾಗಿದೆ.
ಕೆಲಸಕ್ಕೆ ಹಾಜರಾಗುವಂತೆ ಜೈಲಾಧಿಕಾರಿಗಳು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದರೂ ಪ್ರಜ್ವಲ್ ತಲೆಕೆಡಿಸಿಕೊಂಡಿಲ್ಲ. ತಮ್ಮ ಮೇಲಿರುವ ಇತರೆ ನಾಲ್ಕು ಪ್ರಕರಣಗಳ ನ್ಯಾಯಾಲಯದ ವಿಚಾರಣೆಯ ನೆಪವೊಡ್ಡಿ ಅವರು ಕೆಲಸಕ್ಕೆ ಗೈರಾಗುತ್ತಿದ್ದಾರೆ. ಕೆಲಸದ ಸಮಯವನ್ನು ಯೋಗ, ಧ್ಯಾನ ಹಾಗೂ ಪುಸ್ತಕ ಓದುವುದರಲ್ಲೇ ಕಳೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜೈಲಿನಲ್ಲೂ ಪ್ರಭಾವಿಗಳಿಗೆ ರಾಜಾತಿಥ್ಯ ಸಿಗುತ್ತಿದೆಯೇ ಎಂಬ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ಎದ್ದಿದೆ.


