
ಬೆಂಗಳೂರು: ರಾಜಧಾನಿಯ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಕೊಟ್ಟಿಗೆಪಾಳ್ಯದಲ್ಲಿ ಶನಿವಾರ ಮುಂಜಾನೆ ಭೀಕರ ಕೌಟುಂಬಿಕ ದುರಂತ ಸಂಭವಿಸಿದೆ. ತೀವ್ರ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಪ್ರಶಾಂತ್ (34) ಎಂಬಾತ ತನ್ನ ಹೆತ್ತ ತಾಯಿ ಮಂಗಳಮ್ಮ (55), ವೃದ್ಧ ಅಜ್ಜಿ ನಂಜಮ್ಮ ಹಾಗೂ ಮಾವ ಸತೀಶ್ (50) ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಮೂವರನ್ನು ಕೊಂದ ಬಳಿಕ ಆರೋಪಿ ಪ್ರಶಾಂತ್ ತಾನೂ ಸಹ ಕೋಣೆಯೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಶನಿವಾರ ಮುಂಜಾನೆ ಪ್ರಶಾಂತ್ನ ತಂದೆ ಚಿಕ್ಕಣ್ಣ ಅವರು ಇಸ್ತ್ರಿ ಅಂಗಡಿ ತೆರೆಯಲು ಮನೆಯಿಂದ ಹೊರಗೆ ಹೋದ ತಕ್ಷಣವೇ ಈ ಹತ್ಯಾಕಾಂಡ ನಡೆದಿದೆ. ಮನೆಯೊಳಗಿನಿಂದ ಕೇಳಿಬಂದ ಕಿರುಚಾಟ ಆಲಿಸಿ ಧಾವಿಸಿದ ಅಕ್ಕಪಕ್ಕದ ನಿವಾಸಿಗಳು, ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೂವರ ಮೃತದೇಹಗಳನ್ನು ಕಂಡು ದಿಗಿಲುಗೊಂಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಸಾರ್ವಜನಿಕರು, ಕೈಯಲ್ಲಿ ಮಾರಕಾಸ್ತ್ರ ಹಿಡಿದು ನಿಂತಿದ್ದ ಪ್ರಶಾಂತ್ನನ್ನು ಸಾಹಸದಿಂದ ಹಿಡಿದು ಕೋಣೆಯೊಳಗೆ ತಳ್ಳಿ ಹೊರಗಿನಿಂದ ಲಾಕ್ ಮಾಡಿದ್ದಾರೆ. ಆದರೆ ಪೊಲೀಸರು ಸ್ಥಳಕ್ಕೆ ತಲುಪುವಷ್ಟರಲ್ಲಿ ಆರೋಪಿ ಕೋಣೆಯೊಳಗೆ ಆತ್ಮಹತ್ಯೆ ಮಾಡಿಕೊಂಡಿದ್ದನು. ಸ್ಥಳಕ್ಕೆ ಪಶ್ಚಿಮ ವಿಭಾಗದ ಡಿಸಿಪಿ ಯತೀಶ್ ಎನ್. ಹಾಗೂ ಕಾಮಾಕ್ಷಿಪಾಳ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರಿದಿದೆ.


