
ಕೇರಳ: ಸೋದರಸಂಬಂಧಿ ಸಹೋದರಿಯ ಮದುವೆಗೆಂದು ಬೆಂಗಳೂರಿನಿಂದ ಕಾರಿನಲ್ಲಿ ಹೊರಟಿದ್ದ ಐದು ಮಂದಿ ಆಪ್ತ ಸ್ನೇಹಿತರ ಪೈಕಿ ನಾಲ್ವರು ಯುವ ಇಂಜಿನಿಯರ್ಗಳು ಮನೆಗೆ ತಲುಪಲು ಕೇವಲ 20 ಕಿಲೋಮೀಟರ್ ಬಾಕಿ ಇರುವಾಗ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಕಣ್ಣೂರಿನ ಶಾನ್ ಸಿರಾಜ್ (21), ಕಾಂಞಂಗಾಡ್ನ ಮೊಹಮ್ಮದ್ ರಿಜ್ವಾನ್ (21), ನವದೆಹಲಿಯ ಪರಮ ಛೆಟ್ರಿ (21) ಹಾಗೂ ಹೈದರಾಬಾದ್ನ ಹರ್ಷ್ ಸಥೂರಿ (21) ಮೃತಪಟ್ಟ ದುರ್ದೈವಿಗಳು. ಇವರೊಂದಿಗೆ ಪ್ರಯಾಣಿಸುತ್ತಿದ್ದ ತ್ರಿಶೂರ್ ಮೂಲದ ಆದಿತ್ಯ ಕೃಷ್ಣನ್ ತೀವ್ರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.
ಐದೂ ಮಂದಿ ಯುವಕರು ಬೆಂಗಳೂರಿನ ಯಲಹಂಕದ ‘ವಿಎಸ್ಎಂ ಇನ್ಸ್ಟಿಟ್ಯೂಟ್ ಆಫ್ ಏರೋಸ್ಪೇಸ್ ಇಂಜಿನಿಯರಿಂಗ್’ ಕಾಲೇಜಿನಲ್ಲಿ ಇತ್ತೀಚೆಗಷ್ಟೇ ಏರೋನಾಟಿಕಲ್ ಇಂಜಿನಿಯರಿಂಗ್ ಪದವಿ ಮುಗಿಸಿದ್ದರು. ಭಾನುವಾರ ನಡೆಯಬೇಕಿದ್ದ ಮದುವೆಗಾಗಿ ಶುಕ್ರವಾರ ಸಂಜೆ ಬೆಂಗಳೂರಿನಿಂದ ಕಾರಿನಲ್ಲಿ ಹೊರಟಿದ್ದರು. ಪ್ರಯಾಣಕ್ಕೂ ಮುನ್ನ ಇವರು ಕಾರಿನಲ್ಲಿ ಕ್ಲಿಕ್ಕಿಸಿಕೊಂಡಿದ್ದ ಸೆಲ್ಫಿ ಚಿತ್ರವೇ ಕೊನೆಯದಾಗಿದೆ.
ರಾತ್ರಿ 11.30ರ ಸುಮಾರಿಗೆ ಮಟ್ಟನ್ನೂರು ಬಳಿಯ ಕೂಡಲಿ ತಲುಪಿದಾಗ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಭಾರಿ ಗಾತ್ರದ ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದು, ಪೊಲೀಸರು ಗ್ಯಾಸ್ ಕಟರ್ ಬಳಸಿ ಗಾಯಾಳುಗಳನ್ನು ಹೊರತೆಗೆದಿದ್ದಾರೆ. ಚಾಲಕ ನಿದ್ದೆಯ ಮಂಪರಿನಲ್ಲಿದ್ದಿದ್ದೇ ಅಪಘಾತಕ್ಕೆ ಕಾರಣ ಎಂದು ಶಂಕಿಸಲಾಗಿದೆ. ಮದುವೆ ಸಂಭ್ರಮದಲ್ಲಿದ್ದ ಕುಟುಂಬಸ್ಥರು ಈಗ ಕಣ್ಣೀರಿನ ಸಾಗರದಲ್ಲಿ ಮುಳುಗಿದ್ದಾರೆ.


