ಬಾಗಲಕೋಟೆ: ಸಹೋದರ ಸಂಬಂಧಗಳೇನಿದ್ದರೂ ಅದು ಮದುವೆಯ ವರೆಗೆ ಸೀಮಿತ ನಂತರ ಮುಂದುವರೆಯುವುದಿಲ್ಲ ಎನ್ನುವವರ ಮಧ್ಯೆ ಇಲ್ಲೊಂದು ಅಪರೂಪದ ಮನ ಮಿಡಿಯುವ ಘಟನೆ ನಡೆದಿದೆ. ಇಲ್ಲಿನ ಗುಳೇದಗುಡ್ಡದಲ್ಲಿ ಅಕ್ಕ-ತಮ್ಮ ಸಾವಿನಲ್ಲೂ ಒಂದಾಗಿರುವ ಘಟನೆ ವರದಿಯಾಗಿದೆ. ತಮ್ಮನ ಮೇಲೆ ಅಕ್ಕನ ಪ್ರೀತಿ ಎಷ್ಟಿತ್ತು ಎಂದರೆ ತಮ್ಮನ ಸಾವನ್ನು ಅರಗಿಸಿಕೊಳ್ಳದ ಜೀವ ಆತನೊಡನೆ ಪ್ರಾಣ ಬಿಟ್ಟಿದೆ.
ಗುಳೇದಗುಡ್ಡ ಪಟ್ಟಣದ ಲಕ್ಷ್ಮೀ ಸಹಕಾರಿ ಬ್ಯಾಂಕಿನ ಮಾಜಿ ನಿರ್ದೇಶಕ 61 ವರ್ಷದ ಶಂಕರ ಸಿಂಧೆ ಅನಾರೋಗ್ಯದಿಂದ ಬಳಲುತ್ತಿದ್ದರು.ಇವರ ಅಕ್ಕ ಸುಮನ್ ಬಾಯಿ ಅವರು ತಮ್ಮನಿಗೆ ಆರೈಕೆ ಮಾಡುತ್ತಿದ್ದರು. ಅಕ್ಕ ಸುಮನ್ ಬಾಯಿ ಅವರು ತಮ್ಮನಿಗೆ ಬೆಳಿಗ್ಗೆ ಚಹಾ ಕೊಡಲು ಬಂದವರು ತಮ್ಮನ ಸಾವಿನ ವಿಷಯ ತಿಳಿದು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಗಾಬರಿಯಿಂದ ತಮ್ಮನ ಶವದ ಮೇಲೆ ಕುಸಿದುಬಿದ್ದ ಅವರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅಷ್ಟರಲ್ಲಾಗಲೇ ಹೃದಯಾಘಾತದಿಂದ ಸುಮನ್ ಬಾಯಿ ಮೃತಪಟ್ಟಿದ್ದಾರೆಂದು ವೈದ್ಯರು ತಿಳಿಸಿದ್ದಾರೆ.63 ವರ್ಷದ ಸುಮನ್ ಬಾಯಿ ಹಾಗೂ 61 ವರ್ಷದ ಶಂಕರ್ ಒಂದೇ ದಿನ ಸಾವನ್ನಪ್ಪಿರುವುದರಿಂದ ಸಂಬಂಧಿಕರಿಗೆ ಬರಸಿಡಿಲು ಬಡಿದಂತಾಗಿದೆ. ಸಾವಿನಲ್ಲೂ ಒಂದಾದ ಅಕ್ಕ ತಮ್ಮನ ಪ್ರೀತಿ ಮನ ಕಲಕುವಂತಿದೆ.