ಬೆಂಗಳೂರು: ನಾನು ರಾಜಕಾರಣಕ್ಕೆ ಬಂದಿದ್ದು ಆಸ್ತಿ ಪಾಸ್ತಿ ಮಾಡಲು, ಲಂಚ ಹೊಡೆಯಲು ಅಲ್ಲ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಇಂದು ಬಿಜೆಪಿ ರಾಜ್ಯ ಕಚೇರಿ ಜಗನ್ನಾಥ ಭವನದಲ್ಲಿ ಮಾತನಾಡಿದ ಪ್ರಮೋದ್ ಮಧ್ವರಾಜ್, ನಾನು ರಾಜಕಾರಣದಲ್ಲಿ ಇರುವುದು ಜನರ ಸೇವೆ ಮಾಡಲು ಎಂದು ಹೇಳಿದ್ದಾರೆ.
ಇದೇ ವೇಳೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಮಧ್ವರಾಜ್, ಪಕ್ಷ ಬಯಸಿದರೆ ನಾನು ಉಡುಪಿ-ಚಿಕ್ಕಮಗಳೂರು ಅಭ್ಯರ್ಥಿ ಆಗುತ್ತೇನೆಂದು ನಾನು ಆರು ತಿಂಗಳ ಹಿಂದೆಯೇ ಘೋಷಣೆ ಮಾಡಿದ್ದೇನೆ, ಅದನ್ನು ಈಗ ಮತ್ತೆ ಪುನರುಚ್ಚಾರ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಅಲ್ಲದೇ, ನನಗೆ ಬಿಜೆಪಿಯಲ್ಲಿ ಏನೂ ಸ್ಥಾನಮಾನ ಕೊಡದೇ ಇದ್ದರೂ ಕೂಡಾ ನನ್ನ ಕೊನೆಯ ಉಸಿರು ಇರುವ ತನಕ ಬಿಜೆಪಿಯಲ್ಲೇ ಇರುತ್ತೇನೆ,ಪಕ್ಷ ಯಾವ ರೀತಿ ಅವಕಾಶ ಕೊಡುತ್ತದೋ ಅದೇ ರೀತಿಯಲ್ಲಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.
ಇದಲ್ಲದೇ, ನೀನು ಹೀಗೆಯೇ ಇರಬೇಕು ಅಂದರೆ ಹೀಗೆಯೇ ಪಕ್ಷದಲ್ಲಿ ಇರುತ್ತೇನೆ, ನನಗೆ ಬಿಜೆಪಿಯಲ್ಲಿ ಯಾವುದೇ ಬೇಸರ ಇಲ್ಲ ಎಂದು ಪ್ರಮೋದ್ ಮಧ್ವರಾಜ್ ಸ್ಪಷ್ಟಪಡಿಸಿದ್ದಾರೆ.