ಮಂಗಳೂರು : ಕೋವಿಡ್ ಅನ್ನೋ ಆಗುಂತಕ ಯಾರನ್ನು ಸುಮ್ಮನೆ ಬಿಟ್ಟಿದ್ದಾನೆ ಹೇಳಿ. ಬಡವನಿಂದ ಹಿಡಿದು ಅಗರ್ಭ ಶ್ರೀಮಂತನವರೆಗೂ ಎಲ್ಲರಿಗೂ ಶಾಕ್ ಕೊಟ್ಟಿದೆ ಈ ಡೆಡ್ಲಿ ವೈರಸ್. ಅದರಲ್ಲೂ ಉದ್ಯಮದಾರರಿಗೆ ಸದ್ಯಕ್ಕಂತೂ ಚೇತರಿಸಿಕೊಳ್ಳೋಕೆ ಸಾಧ್ಯವಾಗದಂತಹ ಹೊಡೆತ ಕೊಟ್ಟಿದೆ.
ಮನೆಯಿಂದ ಹೊರಗಡೆ ಬರುವವರ ಸಂಖ್ಯೆ ಕಡಿಮೆಯಾದ್ದರಿಂದ ಕೆಲವೊಂದು ತಿನ್ನೋ ಪದಾರ್ಥಗಳನ್ನು ಕೊಳ್ಳೋರೆ ಇಲ್ಲ ಅನ್ನೋ ಹಾಗಾಗಿದೆ. ಅದರಲ್ಲೂ ತಂಪು ಪಾನೀಯಗಳು, ಐಸ್ ಕ್ರೀಂ ಅಂದ್ರೆ ಜನ ದೂರ ಓಡ್ತಾರೆ ಅನ್ನೋ ಹಾಗಿದೆ ಪರಿಸ್ಥಿತಿ. ಎಲ್ಲಿ ಐಸ್ ಕ್ರೀಂ ತಿಂದು ನೆಗಡಿ, ಜ್ವರ ಬಂದು ಕೊರೊನಾ ಬಂದು ಬಿಟ್ರೆ ಅಂತಾ ಜನ ಅದನ್ನು ತಿನ್ನೋದನ್ನೇ ಕಡಿಮೆ ಮಾಡಿದ್ದಾರೆ. ಇನ್ನೊಂದು ಕಡೆ ಐಸ್ ಕ್ರೀಂ ಪಾರ್ಲರ್ ಗಳೂ ಕೂಡ ವ್ಯಾಪಾರವಿಲ್ಲದೇ ಬಾಗಿಲು ಮುಚ್ಚಿದೆ. ಇದೆಲ್ಲಾ ನೇರವಾಗಿ ಹೊಡೆತ ಕೊಟ್ಟಿರೋದು ಐಸ್ ಕ್ರೀಂ ಉದ್ಯಮದ ಮೇಲೆ.
ಆದರೆ ಹಾಗಂಥ ಸುಮ್ಮನೆ ಕೂತರೇ ಹೇಗೆ ಎಂದು, ಮಂಗಳೂರಿನ ಹ್ಯಾಂಗ್ಯೋ ಐಸ್ ಕ್ರೀಂ ಸಂಸ್ಥೆ ಒಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದೆ. ರೋಗನಿರೋಧಕ ಶಕ್ತಿ ತುಂಬುವ ಚ್ಯವನಪ್ರಾಶ, ತುಳಸಿ, ನಿಂಬೆ, ಶುಂಠಿ, ಅರಿಶಿಣ ಮೊದಲಾದ ಫ್ಲೇವರ್ಗಳ ಐಸ್ ಕ್ರೀಂಅನ್ನು ಮಾರುಕಟ್ಟೆಗೆ ಬಿಡಲು ಸಜ್ಜಾಗಿದೆ. ಈ ಬಗ್ಗೆ ಕಳೆದ 40 ದಿನಗಳಿಂದ ಐಸ್ ಕ್ರೀಂಗಳ ಪ್ರಯೋಗಗಳನ್ನು ಮಾಡಲಾಗುತ್ತಿದೆ.
ಲಾಕ್ಡೌನ್ ಬಳಿಕ ಐಸ್ ಕ್ರೀಂ ಉದ್ಯಮಕ್ಕೆ ಬಿದ್ದ ದೊಡ್ಡ ಹೊಡೆತದ ಸಂದರ್ಭದಲ್ಲಿ ದೇಶದ ಎಲ್ಲ ಐಸ್ ಕ್ರೀಂ ಸಂಸ್ಥೆಗಳ ಮಾಲೀಕರು ಆನ್ಲೈನ್ ಸಭೆ ಸೇರಿ ಐಸ್ ಕ್ರೀಂ ಉದ್ಯಮ ಮತ್ತೆ ಚೇತರಿಸಿಕೊಳ್ಳಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದ್ದಾರೆ. ಈ ಸಂದರ್ಭದಲ್ಲಿ ತಜ್ಞರು ರೋಗನಿರೋಧಕವಾದ ಚ್ಯವನಪ್ರಾಶ ಸೇರಿದಂತೆ ಮೊದಲಾದ ಐಸ್ ಕ್ರೀಂಗಳನ್ನು ತಯಾರಿಸಲು ಸಲಹೆ ನೀಡಿದ್ದಾರೆ. ಇದರಂತೆ ಈ ಐಸ್ ಕ್ರೀಂ ತಯಾರಿಗೆ ಹ್ಯಾಂಗ್ಯೋ ಐಸ್ ಕ್ರೀಂ ಮುಂದಾಗಿದೆ.
ಮುಗ್ಗರಿಸಿರುವ ಈ ಉದ್ಯಮ ಚೇತರಿಸಿಕೊಳ್ಳಲು ಹೊಸ ಯೋಜನೆ ಜನರನ್ನು ಮತ್ತೆ ಐಸ್ ಕ್ರೀಂ ತಿನ್ನಿಸಲು ಉತ್ತೇಜಿಸುತ್ತದೆ ಎಂಬುದು ಐಸ್ ಕ್ರೀಂ ತಯಾರಕರ ನಿರೀಕ್ಷೆಯಾಗಿದೆ. ಇದಕ್ಕೆ ಜನರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.