ಶ್ರೀನಗರ: ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಗೋಪಾಲಪುರಾ ಪ್ರದೇಶದಲ್ಲಿ ಕಾಶ್ಮೀರಿ ಪಂಡಿತೆಯನ್ನು ಉಗ್ರರು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ನಡೆದಿದೆ. ಸಾಂಬಾ ಜಿಲ್ಲೆಯ ರಾಜ್ ಕುಮಾರ್ ಅವರ ಪತ್ನಿ ರಜನಿ ಹತ್ಯೆಯಾದ ಕಾಶ್ಮೀರಿ ಪಂಡಿತೆ ಎಂದು ಗುರುತಿಸಲಾಗಿದೆ. ರಜನಿ ಶಾಲಾ ಶಿಕ್ಷಕಿ ಹಾಗೂ ಜಮ್ಮು ವಿಭಾಗದ ಸಾಂಬಾ ನಿವಾಸಿಯಾಗಿದ್ದು, ಕುಲ್ಗಾಮ್ನ ಗೋಪಾಲ್ಪೋರಾ ಹೈಸ್ಕೂಲ್ನಲ್ಲಿ ರಜನಿ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ.
ತೀವ್ರವಾಗಿ ಗಾಯಗೊಂಡಿರುವ ಆಕೆಯನ್ನು ತಕ್ಷಣವೇ ಕುಲ್ಗಾಮ್ನ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾದೇ ಮೃತಪಟ್ಟಿದ್ದಾರೆ. ಘಟನೆ ನಡೆದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭದ್ರತಾ ಪಡೆಗಳು ಭೇಟಿ ನೀಡಿದ್ದಾರೆ.
ರಜನಿ ಹತ್ಯೆ ದಾಳಿಯು ಇತ್ತೀಚಿಗೆ ಕಣಿವೆಯಲ್ಲಿ ಕಾಶ್ಮೀರಿ ನಾಗರಿಕ ಹತ್ಯೆಗಳ ಸರಣಿಯಲ್ಲಿ ಒಂದಾಗಿದೆ. ಈ ಮೊದಲು ಮೇ 12 ರಂದು ಬುದ್ಗಾಮ್ ಜಿಲ್ಲೆಯಲ್ಲಿ ಕಂದಾಯ ಇಲಾಖೆ ನೌಕರ ರಾಹುಲ್ ಭಟ್ ಅವರನ್ನು ಉಗ್ರರು ಹತ್ಯೆ ಮಾಡಿದ್ದರು. ಕಳೆದ ವಾರ, ಬುದ್ಗಾಮ್ನ ಚದೂರ ಪ್ರದೇಶದಲ್ಲಿ ಕಲಾವಿದೆ ಅಮ್ರೀನ್ ಭಟ್ ಸಾವನ್ನಪ್ಪಿದ್ದರು.
ಈ ಘಟನೆಯ ಬಗ್ಗೆ ನ್ಯಾಶನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಅವರು ಸಂತಾಪ ಸೂಚಿಸಿ, ಇದು ನಾಗರಿಕರನ್ನು ಗುರಿಯಾಗಿಸಿಕೊಂಡು ಮಾಡಿರುವ ದಾಳಿಯಾಗಿದೆ. ತುಂಬಾ ದುಃಖವಾಗಿದೆ. ಸರ್ಕಾರದ ಭರವಸೆಗಳಂತೆ ಖಂಡನೆ ಮತ್ತು ಸಂತಾಪಗಳ ಮಾತುಗಳು ಸುಳ್ಳಾಗಿದೆ ಎಂದು ತಿಳಿಸಿದರು.