ಗಗನಮುಖಿಯಾಗಿದ್ದ ಖಾದ್ಯ ತೈಲಗಳ ಬೆಲೆ ನಿಯಂತ್ರಿಸುವ ಸಲುವಾಗಿ ಕೇಂದ್ರ ಸರ್ಕಾರ ಅಡುಗೆ ಎಣ್ಣೆಗಳ ಮೇಲಿನ ಆಮದು ಸುಂಕ ಇಳಿಸಿರುವುದು ನೇರವಾಗಿ ಅನ್ನದಾತರ ಮೇಲೆ ಪ್ರಭಾವ ಬೀರಿದೆ. ಸುಂಕ ಇಳಿಕೆ ನೀತಿಯಿಂದಾಗಿ ಕೊಬ್ಬರಿ ಬೆಲೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ . ಜನವರಿ , ಫೆಬ್ರವರಿಯಲ್ಲಿ ಕ್ವಿಂಟಾಲಿಗೆ 17,400 ರೂಪಾಯಿ ಇದ್ದ ಉಂಡೆ ಕೊಬ್ಬರಿ ಇದೀಗ 13,500 ರೂಪಾಯಿ ಅಂಚಿಗೆ ತಲುಪಿದೆ .
ಕೆಲವೇ ದಿನಗಳಲ್ಲಿ ಬೆಂಬಲ ಬೆಲೆ 11 ಸಾವಿರ ರೂಪಾಯಿಗೆ ಇಳಿದರೂ ಆಶ್ಚರ್ಯವಿಲ್ಲ . ಮಾರುಕಟ್ಟೆ ತಜ್ಞರ ಪ್ರಕಾರ , ಅಡುಗೆ ಎಣ್ಣೆಗಳ ಮೇಲಿನ ಆಮದು ಸುಂಕ ಕಡಿತಗೊಳಿಸಿರುವುದು ಬೆಲೆ ಕುಸಿತಕ್ಕೆ ಕಾರಣವಾಗಿದೆ ಎನ್ನುತ್ತಾರೆ . ಎಣ್ಣೆ ಕಾಳುಗಳ ಬೆಲೆ ಇಳಿಕೆಯಾದಂತೆ ಕೊಬ್ಬರಿ ಎಣ್ಣೆಗೆ ಬೇಡಿಕೆ ಕಡಿಮೆಯಾಗಿರುವ ಪರಿಣಾಮ ಕೊಬ್ಬರಿ ಬೆಲೆ ಕುಸಿತಕ್ಕೆ ಇನ್ನೊಂದು ಕಾರಣ ಎನ್ನಲಾಗಿದೆ. ಕೊಬ್ಬರಿ ದರ ಕುಸಿತ ನೇರವಾಗಿ ರೈತ ಸಮುದಾಯದ ಆರ್ಥಿಕತೆ ಮೇಲೆ ಬಾರಿ ಹೊಡೆತಕ್ಕೆ ಕಾರಣವಾಗಬಹುದು ಎಂಬ ಚಿಂತನೆ ಸರ್ಕಾರದ ಗಮನಕ್ಕೆ ಬರಲಿಲ್ಲವೇ ಎಂಬ ಪ್ರಶ್ನೆಯ ಜೊತೆಗೆ , ಆಯಿಲ್ ಕಂಪನಿಗಳ ಭವಿಷ್ಯವೇ ಸರ್ಕಾರಕ್ಕೆ ಹೆಚ್ಚಾಯಿತೇ ಎಂಬ ಮಾತು ಕೇಳಿಬರುತ್ತಿವೆ.