ಮಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮಂಗಳವಾರ ಸುಳ್ಯ ನ್ಯಾಯಾಲಯಕ್ಕೆ ಹಾಜರಾಗಲು ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅವರನ್ನು ಸ್ವಾಗತಿಸಿದರು.
ಇಂಧನ ಸಚಿವರಾಗಿದ್ದ ವೇಳೆ ವಿದ್ಯುತ್ ಕೇಳಿ ಕರೆ ಮಾಡಿದ ವ್ಯಕ್ತಿಯ ಜೊತೆ ವಾಗ್ವಾದ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಸಾಕ್ಷ್ಯ ಹೇಳಲು ಡಿ. ಕೆ. ಶಿವಕುಮಾರ್ ಆಗಮಿಸಿದ್ದಾರೆ. ಈ ಹಿನ್ನಲೆಯಲ್ಲಿ ಮಂಗಳವಾರ ಬೆಳಗ್ಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರು ಮಾಧ್ಯಮಗಳ ಜೊತೆ ಮಾತನಾಡಿದರು.
“ನಾನು ಇಂಧನ ಸಚಿವನಾಗಿದ್ದಾಗ ಯಾರೋ ಒಬ್ಬ ತರ್ಲೆ ಫೋನ್ ಮಾಡಿದ್ದ. ನನ್ನ ಜೊತೆ ಬಾಯಿಗೆ ಬಂದ ಹಾಗೆ ಮಾತನಾಡಿದ್ದ. ಅವಾಚ್ಯ ಶಬ್ದಗಳಿಂದ ನನಗೆ ಬೈದಿದ್ದ. ನಮ್ಮ ಅಧಿಕಾರಿಗಳು ಅವನ ವಿರುದ್ದ ದೂರು ನೀಡಿದ್ದರು. ಅಧಿಕಾರಿಗಳಿಗೂ ಬಾಯಿಗೆ ಬಂದ ಹಾಗೇ ಬೈದಿದ್ದ. ಸಾಕ್ಷಿಯಾಗಿ ಬರಬೇಕು ಅಂತಾ ನ್ಯಾಯಾಲಯ ಹೇಳಿತ್ತು. ಪ್ರಾರಂಭದಲ್ಲಿ ನನಗೂ ಈ ಬಗ್ಗೆ ಗೊತ್ತಾಗಲಿಲ್ಲ. ನಮಗೆಲ್ಲಾ ಈ ವಿಚಾರದಲ್ಲಿ ಸ್ವಲ್ಪ ತಿಳುವಳಿಕೆ ಕಡಿಮೆ. ಲುಕ್ ಔಟ್ ನೋಟಿಸ್, ಪೇಪರ್ನಲ್ಲಿ ಹಾಕ್ತೇವೆ ಎಂದು ಆರ್ಡರ್ ಮಾಡಿದ್ದಾರೆ ಅಂತಾ ಗೊತ್ತಾಯ್ತು. ಕೋರ್ಟ್ ಆದೇಶಕ್ಕೆ ತಲೆಬಾಗಿ ಬಂದಿದ್ದೇನೆ” ಎಂದು ಡಿ. ಕೆ. ಶಿವಕುಮಾರ್ ಹೇಳಿದರು.
ಸದ್ಯದ ಪರಿಸ್ಥಿತಿ ಮಂಗಳೂರಿನಲ್ಲಿ ನಡೆಯುತ್ತಿರುವ ನೈತಿಕ ಪೊಲೀಸ್ ಗಿರಿ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಡಿ. ಕೆ. ಶಿವಕುಮಾರ್, “ಬಿಜೆಪಿ ಸರ್ಕಾರದ್ದು ಅತಿಯಾಗುತ್ತಿದೆ. ರಾಜ್ಯದಲ್ಲಿ ಕಾನೂನು ಹೋಗಿದೆ. ಪೊಲೀಸರು ಕೆಲಸ ಮಾಡುತ್ತಿಲ್ಲ. ಪೊಲೀಸರ ಕೆಲಸವನ್ನು ಬಿಜೆಪಿ ಕಾರ್ಯಕರ್ತರು ಮಾಡುತ್ತಿದ್ದಾರೆ.
ಅಧಿಕಾರವನ್ನು ಕಾರ್ಯಕರ್ತರು ಮಾಡುತ್ತಿದ್ದಾರೆ. ಇತ್ತೇಚೆಗೆ ಟಿವಿ ಡಿಬೇಟ್ನಲ್ಲಿ ಭಾಗವಹಿಸಿದ ಕಾಂಗ್ರೆಸ್ನ ಮಹಿಳಾ ಕಾರ್ಯಕರ್ತೆಗೆ ಓರ್ವ ಬಹಿರಂಗವಾಗಿಯೇ ಹೊಡೆಯೋದಾಗಿ ಹೇಳಿದ್ದ. ಇದು ಸದ್ಯದ ಸ್ಥಿತಿಯನ್ನು ತೋರಿಸುತ್ತಿದೆ” ಎಂದರು.
ಉತ್ತರ ಪ್ರದೇಶದಲ್ಲಿ ರೈತ ಹೋರಾಟದ ಸಂದರ್ಭದಲ್ಲಿ ನಡೆದ ಹಿಂಸಾಚಾರದ ಬಗ್ಗೆ ಮಾತನಾಡಿದ ಅವರು, “ದೇಶದಲ್ಲಿ ಕಾನೂನೇ ಇಲ್ಲ. ಪ್ರತಿಭಟನೆ, ಹೋರಾಟ ಮಾಡುವುದು ಅವರವರ ಹಕ್ಕು. ಗಾಂಧೀಜಿ ಅಹಿಂಸೆಯ ಮೂಲಕ ಹೋರಾಟ ಮಾಡಿ ಅಂತಾ ಹೇಳಿದ್ದಾರೆ.
ಹನ್ನೊಂದು ತಿಂಗಳಿಂದ ರೈತರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಕೇಂದ್ರ ಸಚಿವರ ಮಗ, ಉಪಮುಖ್ಯಮಂತ್ರಿ ಮಗ ಪ್ರತಿಭಟನಾಕಾರರನ್ನು ಕೊಲೆ ಮಾಡಿದ್ದಾರೆ. ಈ ಘಟನೆಯಲ್ಲಿ 4 ಜನ ಸತ್ತಿದ್ದಾರೆ. ಹೋರಾಟ ಮಾಡುತ್ತಿದ್ದವರನ್ನು ಗಾಡಿ ಹತ್ತಿಸಿ ಕೊಂದಿದ್ದಾರೆ. ಇವತ್ತಿಗೂ ಅವರನ್ನು ಅರೆಸ್ಟ್ ಮಾಡಿಲ್ಲ, ಮಂತ್ರಿಯ ರಾಜೀನಾಮೆಯನ್ನು ಸರ್ಕಾರ ಪಡೆದಿಲ್ಲ” ಎಂದು ಡಿ. ಕೆ. ಶಿವಕುಮಾರ್ ಆರೋಪಿಸಿದರು.
“ಪ್ರಿಯಾಂಕಾ ಗಾಂಧಿ ಮೇಲೂ ಹಲ್ಲೆ ಮಾಡಿದ್ದಾರೆ. ಇದು ರಾಜಕೀಯ, ನೆಂಟಸ್ತಿಕೆ ಅಲ್ಲ. ಹಕ್ಕನ್ನು ಕಿತ್ತುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಇದು ಭಾರತದ ಸಂಸ್ಕೃತಿಗೆ ಅವಮಾನ. ಬ್ರಿಟಿಷರಿಗಿಂತ ಹೀನಾಯವಾಗಿ ನಡೆದುಕೊಂಡಿದ್ದಾರೆ. ಗಾಂಧೀಜಿಯವರು ಬದುಕಿದ್ದರೆ ಏನು ಹೇಳುತ್ತಿದ್ದರು. ಈ ದೇಶದ ಎಲ್ಲಾ ವರ್ಗದ ಜನರಿಗೆ ಗಾಂಧಿ ಕುಟುಂಬ ನ್ಯಾಯ ಕೊಡಿಸಿದೆ. ಉತ್ತರ ಪ್ರದೇಶದ ಪೊಲೀಸರಿಗೆ ನಾವು ಯಾರೂ ಹೆದರಲ್ಲ. ನಾವೆಲ್ಲಾ ರೈತರ ಪರವಾಗಿ ನಿಲ್ಲುತ್ತೇವೆ, ಹೋರಾಟ ಮಾಡುತ್ತೇವೆ” ಎಂದು ಡಿ. ಕೆ. ಶಿವಕುಮಾರ್ ಹೇಳಿದರು.
ದೇವಾಲಯಕ್ಕೆ ಭೇಟಿ ಮಂಗಳೂರು ನಗರದಿಂದ ನೇರ ಸುಳ್ಯಕ್ಕೆ ತೆರಳಿದ ಡಿ. ಕೆ. ಶಿವಕುಮಾರ್ ಮಧ್ಯಾಹ್ನದ ವೇಳೆಗೆ ಸುಳ್ಯ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗಲಿದ್ದಾರೆ. ಆ ಬಳಿಕ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ಸುಬ್ರಹ್ಮಣ್ಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.