ಮೂಲ್ಕಿ: ರಾಜ್ಯದ ದೇವಾಲಯಗಳಲ್ಲಿ ವಸ್ತ್ರಸಂಹಿತೆ ಜಾರಿ ಮಾಡಲು ಧಾರ್ಮಿಕ ಪರಿಷತ್ ತೀರ್ಮಾನಿಸಿದ್ದು, ಬರ್ಮುಡಾ, ತುಂಡುಡುಗೆಗಳನ್ನು ನಿಷೇಧಿಸಲಾಗಿದೆ. ಸಾಂಪ್ರದಾಯಿಕವಾದ ಹಿಂದೂ ಉಡುಗೆಯನ್ನು ತೊಟ್ಟು ದೇವಸ್ಥಾನ ಪ್ರವೇಶಿಸಬೇಕು ಎಂದು ವಿನಂತಿಸಿ ಈಗಾಗಲೇ ಕಟೀಲು ದುರ್ಗಾ ಪರಮೇಶ್ವರಿ ದೇವಾಲಯದಲ್ಲಿ ಫಲಕ ಹಾಕಲಾಗಿದೆ.
ನಮ್ಮ ಸಂಸ್ಕೃತಿ ಯನ್ನು ಉಳ್ಳಿಸಲು ಹಾಗು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎನ್ನುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಆದರೆ ಮುಜರಾಯಿ ಇಲಾಖೆಯಿಂದ ಅಧಿಕೃತವಾಗಿ ಯಾವುದೇ ಆದೇಶ ಬಂದಿಲ್ಲ.
ಧಾರ್ಮಿಕ ಕ್ಷೇತ್ರದಲ್ಲಿ ಹಿಂದೂ ಸಂಪ್ರದಾಯದಂತೆ ಉಡುಗೆ-ತೊಡುಗೆಗಳು ಇರಬೇಕು ಎಂಬ ಉದ್ದೇಶದಿಂದ ಈ ವಿನಂತಿ ಮಾಡಲಾಗಿದೆ. ಇದು ವಿನಂತಿಯೇ ಹೊರತು ಕಡ್ಡಾಯವಲ್ಲ ಎಂದು ಕಟೀಲು ಕ್ಷೇತ್ರದ ಅರ್ಚಕರಾದ ಹರಿನಾರಾಯಣದಾಸ ಆಸ್ರಣ್ಣರವರು ಹೇಳಿದರು .
ದೇವಸ್ಥಾನವು ಪವಿತ್ರವಾದ ಕ್ಷೇತ್ರ ಆಗಿರುವುದರಿಂದ ಶ್ರದ್ಧೆ ಭಕ್ತಿ, ಭಾವ ಇರಬೇಕು. ಈ ಕಾರಣಕ್ಕೆ ಅನೇಕ ದೇವಾಲಯಗಳಲ್ಲಿ ಈ ರೀತಿ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ ಎಂದು ದೇವಾಲಯದ ಮೂಲಗಳು ತಿಳಿಸಿವೆ.
ದಕ್ಷಿಣ ಕನ್ನಡ ಜಿಲ್ಲೆಯ ಹಲವು ದೇಗುಲಗಳಲ್ಲಿ ಈ ರೀತಿಯ ಕ್ರಮ ಜಾರಿಯಾಗಲಿದೆ ಎನ್ನಲಾಗಿದ್ದು, ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಇಂತಹ ಯಾವುದೇ ಫಲಕ ಹಾಕಲಾಗಿಲ್ಲ. ಈ ಕುರಿತು ಆಡಳಿತ ಮಂಡಳಿಗೆ ಯಾವುದೇ ನಿರ್ದೇಶನ ಬಂದಿಲ್ಲ ಎಂದು ದೇವಾಲಯದ ಮೂಲಗಳು ತಿಳಿಸಿವೆ.