ಮಂಡ್ಯ: ಇಂದು ಕೆಆರ್ಎಸ್ ಅಣೆಕಟ್ಟೆಯಲ್ಲಿ ಸಿಎಂ ಯಡಿಯೂರಪ್ಪ ಬಾಗಿನ ಅರ್ಪಣೆ ಮಾಡಿದ್ದಾರೆ. ಈ ಮೂಲಕ ಅತಿ ಹೆಚ್ಚು ಬಾರಿ ಕಾವೇರಿಗೆ ಬಾಗಿನ ನೀಡಿದ ಸಿಎಂ ಎಂಬ ದಾಖಲೆ ಬರೆದಿದ್ದಾರೆ. ಮಧ್ಯಾಹ್ನ 12.05ರ ಅಭಿಜಿನ್ ಲಗ್ನದಲ್ಲಿ ಬಾಗಿನ ಸಮರ್ಪಣೆ ಮಾಡಿದರು. ಇದು ಐದನೇ ಬಾರಿಯ ಬಾಗಿನ ಅರ್ಪಣೆ ಕಾರ್ಯಕ್ರಮವಾಗಿದೆ. ಅರ್ಚಕ ಡಾ.ಭಾನುಪ್ರಕಾಶ್ ನೇತೃತ್ವದಲ್ಲಿ ಬಾಗಿನ ಅರ್ಪಣೆಯ ಪೂಜಾ ಕೈಂಕರ್ಯ ನಡೆಯಿತು.
ಚರ್ಚೆಗೆ ಗ್ರಾಸವಾದ ಸಿಎಂ ಆಸರೆ!
ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳ ಎಲ್ಲಾ ಜನಪ್ರತಿನಿಧಿಗಳು ಭಾಗವಹಿಸಿದ್ದರು. ಮಂಡ್ಯ ಸಂಸದೆ ಸುಮಲತಾ ಅವರು ಕೂಡ ಬಾಗಿನ ಅರ್ಪಣೆ ಕಾರ್ಯಕ್ರಮಮದಲ್ಲಿ ಭಾಗವಹಿಸಿದ್ದರು. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಣೆಕಟ್ಟಿನ ಮೇಲಿಂದ ಕಾವೇರಿ ಮಾತೆಗೆ ಬಾಗಿನ ಅರ್ಪಣೆ ಮಾಡುವಾಗ ಸಂಸದೆ ಸುಮಲತಾ ಅವರು ಕೂಡ ಪಕ್ಕದಲ್ಲಿ ನಿಂತು ಬಾಗಿನ ಅರ್ಪಣೆ ಮಾಡಿದರು.
ಇದೇ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ ಅವರು ಸುಮಲತಾ ಅವರು ಕಾವೇರಿ ಮಾತೆಗೆ ಬಾಗಿನ ಅರ್ಪಣೆ ಮಾಡುವಾಗ ಆಯ ತಪ್ಪಬಾರದು ಎಂಬ ಉದ್ದೇಶದಿಂದ ಆಸರೆ ಹಿಡಿದಿದ್ದರು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.
ಕೂಡಲೇ ಕ್ಷಮೆ ಕೇಳಿದ ಬಿಎಸ್ವೈ
ಸಿಎಂ ಯಡಿಯೂರಪ್ಪ ಅವರು ಆಸರೆಗೆ ಹಿಡಿದಿದ್ದು, ಅಪಾರ್ಥಕ್ಕೆ ಎಡೆಮಾಡಿಕೊಡಬಾರದು ಎಂದು ತಕ್ಷಣವೇ ಸುಮಲತಾ ಅವರು ಸಿಎಂ ಗಮನಕ್ಕೆ ತಂದರು. ಕೂಡಲೇ ಎಚ್ಚೆತ್ತುಕೊಂಡ ಸಿಎಂ, ಸುಮಲತಾ ಅವರಿಗೆ ಕೈಮುಗಿದರು. ಇದು ಅಚಾತುರ್ಯದ ಘಟನೆಯೊ, ಆಕಸ್ಮಿಕವಾದ ಘಟನೆಯೊ ಒಟ್ಟಾರೆ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧವಾಗಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.