ಬೆಂಗಳೂರು : ರಾಜ್ಯದಲ್ಲಿ ಭಾರಿ ಸಂಚಲನಕ್ಕೆ ಕಾರಣವಾಗಿದ್ದ ಡ್ರಗ್ಸ್ ಪ್ರಕರಣದಲ್ಲಿ ನಟಿಯರಾದ ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿ ಅವರಿಗೆ ಮತ್ತೆ ಸಂಕಷ್ಟ ಎದುರಾಗಿದೆ.
ಸದ್ಯ ಜಾಮೀನಿನ ಮೇಲೆ ಹೊರಗಿರುವ ನಟಿಯರಿಬ್ಬರೂ ಡ್ರಗ್ಸ್ ಸೇವನೆ ಮಾಡಿರೋದು ಸಿಎಫ್ಎಸ್ಎಲ್ ವರದಿಯಲ್ಲಿ ದೃಢವಾಗಿದೆ ಎಂದು ತಿಳಿದುಬಂದಿದೆ. ಇಂದು ಖಾಸಗಿ ವಾಹಿನಿ ಎದುರು ಈ ವಿಚಾರ ಹಂಚಿಕೊಂಡಿರುವ ಸಂಜನಾ ಅವರ ತಾಯಿ ರೇಷ್ಮಾ ಗಲ್ರಾನಿ, ಸಂಜನಾ ಅವರಿಗೆ ಅನಾರೋಗ್ಯದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದಿದ್ದಾರೆ.
ತಮ್ಮ ಫೌಂಡೇಶನ್ ಮುಖಾಂತರ ಅಗತ್ಯವಿರುವವರಿಗೆ ಸ್ವತಃ ಆಹಾರ ಹಂಚುತ್ತಿದ್ದ ಸಂಜನಾ, ಊಟ ಕೊಡಲು ಬರದೇ ಗೈರಾದ ಕುರಿತು ರೇಷ್ಮಾ ಪ್ರತಿಕ್ರಿಯಿಸಿದ್ದಾರೆ. ಎಲ್ಲವೂ ಹಣೆಬರಹ, ದೇವರಿದ್ದಾರೆ, ನಾವೇನೂ ತಪ್ಪು ಮಾಡಿಲ್ಲ. ಸಂಜನಾಗೆ ಹುಷಾರಿಲ್ಲ ಹಾಗಾಗಿ ಊಟ ನೀಡಲು ಬಂದಿಲ್ಲ. ಇಲ್ಲವೆಂದಾದರೆ ಸಂಜನಾ ಅವರೇ ಬಂದು ಊಟ ಕೊಡುತ್ತಿದ್ದರು. ಪದೇಪದೆ ಅದೇ ಮಾತು ಕೇಳಿ ಬರ್ತಿದ್ರೆ ಬೇಜಾರಾಗುತ್ತದೆ. ಹಳೆಯ ಘಟನೆಗಳನ್ನು ಮರೆತು ಬದುಕಬೇಕು ಎಂದುಕೊಂಡಿದ್ದಾರೆ. ಗ್ರಹಚಾರಾನೋ ಏನೋ ಗೊತ್ತಿಲ್ಲ, ಮತ್ತೆ ಅದೇ ಬರ್ತಿದೆ ಎಂದು ಭಾವುಕರಾಗಿ ನುಡಿದಿದ್ದಾರೆ.
ಈ ನಡುವೆ ಡ್ರಗ್ ಸೇವನೆ ವಿಚಾರ ಸಾಬೀತಾದ ಬಳಿಕ ಮೌನಕ್ಕೆ ಜಾರಿದ್ದ ನಟಿ ರಾಗಿಣಿ ದ್ವಿವೇದಿ ಕೂಡ ಮೌನ ಮುರಿದಿದ್ದು,ಇನ್ಸ್ಟಾಗ್ರಾಂನಲ್ಲಿ ನಟಿ ರಾಗಿಣಿ ದ್ವಿವೇದಿ ಸ್ಟೇಟಸ್ನ್ನು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಅವರು ದೇವರ ಪ್ಲಾನ್ ಬಗ್ಗೆ ಭರವಸೆ ಎಷ್ಟಿರಬೇಕು ಅಂದರೆ ನೀವೆಂದುಕೊಂಡಿದ್ದು ನಡೆಯದೇ ಹೋದರೂ ಸಹ ಆತ್ಮವಿಶ್ವಾಸ ಕಳೆದುಕೊಳ್ಳಬಾರದು ಎಂದು ಬರೆಯಲಾಗಿದೆ.
ಸಾಮಾನ್ಯವಾಗಿ ಡ್ರಗ್ ಸೇವನೆ ಪ್ರಕರಣಗಳಲ್ಲಿ ಆರೋಪಿಯ ರಕ್ತ ಹಾಗೂ ಮೂತ್ರದ ಸ್ಯಾಂಪಲ್ಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಆದರೆ ತಿಂಗಳ ಬಳಿಕ ಆರೋಪಿಗಳನ್ನು ಬಂಧನ ಮಾಡಿದಲ್ಲಿ ರಕ್ತ ಹಾಗೂ ಮೂತ್ರದಲ್ಲಿ ಡ್ರಗ್ ಅಂಶ ಪತ್ತೆ ಮಾಡುವುದು ಕಷ್ಟಕರ. ಹೀಗಾಗಿ ಈ ಆರೋಪಿಗಳ ತಲೆಗೂದಲುಗಳನ್ನು ಪರೀಕ್ಷೆಗೆ ರವಾನೆ ಮಾಡಲಾಗಿತ್ತು. ಡ್ರಗ್ ಸೇವನೆ ಮಾಡಿ ವರ್ಷ ಕಳೆದರೂ ಸಹ ಕೂದಲಿನಲ್ಲಿ ಅದರ ಅಂಶ ಇರುತ್ತದೆ. ಹೀಗಾಗಿಯೇ ಕರ್ನಾಟಕದಲ್ಲಿ ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಟ್ಟ ಮೊದಲ ಬಾರಿಗೆ ಆರೋಪಿಗಳ ಕೂದಲನ್ನು ಸಿಎಫ್ಎಸ್ಎಲ್ ಪರೀಕ್ಷೆಗೆ ಕಳುಹಿಸಲಾಗಿತ್ತು.