ಕಾಸರಗೋಡು:ಇಲ್ಲಿನ ಮಂಜೇಶ್ವರ ಕುಂಜತ್ತೂರು ಪದವಿನಲ್ಲಿ ಸ್ಕೂಟರ್ ಮಗುಚಿ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಗದಗ ಮೂಲದ ಯುವಕನ ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಿದೆ. ಆರಂಭದಲ್ಲಿ ಸ್ಕೂಟರ್ ಅಪಘಾತದಿಂದ ಮೃತಪಟ್ಟಿರುವುದಾಗಿ ಸಂಶಯಿಸಲಾಗಿತ್ತು. ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿದ್ದು, ಇದೀಗ ಇದೊಂದು ಕೊಲೆ ಎಂದು ಮಾಹಿತಿ ಹೊರಬಂದಿದೆ.
ಅಪಘಾತ ಸ್ಥಳದಲ್ಲಿ ಮೃತದೇಹದ ತಲೆಗೆ ಸಣ್ಣಪುಟ್ಟ ಗಾಯ ಹಾಗೂ ಸ್ಕೂಟರ್ಗೆ ಯಾವುದೇ ಹಾನಿಯಾಗಿರಲಿಲ್ಲ ಈ ಹಿನ್ನಲೆಯಲ್ಲಿ ಆರಂಭದಲ್ಲೇ ಸಂಶಯ ಉಂಟಾಗಿತ್ತು.ಬಳಿಕ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಕಣ್ಣೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಮರಣೋತ್ತರ ಪರೀಕ್ಷಾ ವರದಿಯಲ್ಲಿ ಕುತ್ತಿಗೆಯನ್ನು ಬಿಗಿದು ಕೊಲ್ಲಲಾಗಿದೆ ಎಂದು ತಿಳಿದುಬಂದಿದೆ. ಕುತ್ತಿಗೆಯಲ್ಲಿ ಎರಡು ಬೆರಳಿನ ಗುರುತು ಪತ್ತೆಯಾಗಿದ್ದು, ಕತ್ತು ಹಿಸುಕಿ ಕೊಲೆಗೈದಿರುವುದಾಗಿ ಸಂಶಯಿಸಲಾಗಿದೆ.ಮೃತ ಹನುಮಂತನ ಮೊಬೈಲ್ ಕೇಂದ್ರೀಕರಿಸಿ ಪ್ರಕರಣದ ತನಿಖೆ ಮುಂದುವರಿದಿದೆ