ಉಡುಪಿ: ಕರಾವಳಿ ಬೈಪಾಸ್ ಸಮೀಪದಿಂದ ಭಾನುವಾರ ಬೆಳಗ್ಗೆ ಅಪಹರಿಸಲ್ಪಟ್ಟಿದ್ದ ಮಗುವನ್ನು ರಕ್ಷಿಸಲಾಗಿದೆ. ಮಿಂಚಿನ ಕಾರ್ಯಾಚರಣೆ ನಡೆಸಿರುವ ಉಡುಪಿ ಪೊಲೀಸರು ಆರೋಪಿ ಸಹಿತ ಮಗುವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಕುಮಟಾ ರೈಲ್ವೇ ನಿಲ್ದಾಣದಲ್ಲಿ ರಕ್ಷಣಾ ಕಾರ್ಯಾಚರಣೆ ಮತ್ತು ಆರೋಪಿ ಬಂಧನ ನಡೆದಿದೆ.
ಮಗು ಅಪಹರಣದ ಆರೋಪಿ ಬಾಗಲಕೋಟೆ ಜಿಲ್ಲೆಯ ಪರಶು ಎಂಬಾತನನ್ನು ಕುಮಟಾ ರೈಲ್ವೇ ನಿಲ್ದಾಣದಲ್ಲಿ ಸ್ಥಳಿಯ ಪೊಲೀಸರ ಸಹಕಾರದೊಂದಿಗೆ ಭಾನುವಾರ ರಾತ್ರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಪಹರಣಕ್ಕೊಳಗಾಗಿದ್ದ ಮಗು ಶಿವರಾಜ್ (2.4 ವರ್ಷ) ಮತ್ತು ಆರೋಪಿಯನ್ನು ಇಂದು ಬೆಳಗ್ಗೆ ಪೊಲೀಸರು ಉಡುಪಿಗೆ ಕರೆ ತಂದಿರುವುದಾಗಿ ತಿಳಿದು ಬಂದಿದೆ.
ಪೊಲೀಸ್ ಕ್ಷಿಪ್ರ ಕಾರ್ಯಾಚರಣೆ ಹೀಗಿತ್ತು: ಆರೋಪಿ ಪರಶು ರವಿವಾರ ಬೆಳಗ್ಗೆ ಕರಾವಳಿ ಬೈಪಾಸ್ ನಿಂದ ಸಿಟಿಬಸ್ ನಲ್ಲಿ ಪ್ರಯಾಣಿಸಿ ಸಂತೆಕಟ್ಟೆಯಲ್ಲಿ ಇಳಿದಿದ್ದನು. ಸಂತೆಕಟ್ಟೆಯಲ್ಲಿ ಆತ ಮಗುವಿನೊಂದಿಗೆ ಕೆಂಪು ಬಣ್ಣದ ಬಸ್ ಹತ್ತಿರುವುದಾಗಿ ಮಹಿಳೆಯೊಬ್ಬರು ನೀಡಿದ ಮಾಹಿತಿ ಪಡೆದಿದ್ದ ಉಡುಪಿ ನಗರ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ನೇತೃತ್ವದ ತಂಡ ತನಿಖೆ ಚುರುಕುಗೊಳಿಸಿತ್ತು. ಅನಂತರ ಪರಶು ತೆರಳಿದ್ದ ಬಸ್ ಪತ್ತೆ ಹಚ್ಚಿದ ಪೊಲೀಸರು ಬಸ್ ನಿರ್ವಾಹಕ ನನ್ನು ಸಂಪರ್ಕಿಸಿದಾಗ ಆತ ತಿಳಿಸಿರುವಂತೆ ಆರೋಪಿ ಮಗುವಿನೊಂದಿಗೆ ಭಟ್ಕಳದಲ್ಲಿ ಇಳಿದು ಹೋಗಿರುವ ವಿಚಾರ ತಿಳಿದಿತ್ತು. ಬಳಿಕ ಪೊಲೀಸರು ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ ಅದರಂತೆ ಭಟ್ಕಳ, ಕುಮಟಾ ಸೇರಿದಂತೆ ಕಾರವಾರ ಪೊಲೀಸರು ಹುಡುಕಾಟ ನಡೆಸಿದ್ದರು. ರಾತ್ರಿ ವೇಳೆ ಕುಮಟಾ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದರು ಎಂದು ತಿಳಿದುಬಂದಿದೆ.
ಆರೋಪಿ ಬಾಗಲಕೋಟೆಯ ದಂಪತಿಯ ಮಗುವನ್ನು ರವಿವಾರ ಬೆಳಗ್ಗೆ ಅಪಹರಣ ಮಾಡಿರುವುದಾಗಿ ಉಡುಪಿ ನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಿಸಲ್ಪಟ್ಟಿತ್ತು. ತನಿಖೆಯನ್ನು ಕೈಗೆತ್ತಿಕೊಂಡ ಉಡುಪಿ ಪೊಲೀಸರು 24 ಗಂಟೆಯೊಳಗಾಗಿ ಆರೋಪಿಯನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.