ಲಖೀಂಪುರ ಖೇರಿಯಲ್ಲಿ ಬಿಜೆಪಿ ಅಭ್ಯರ್ಥಿಗಳಾಗಿ ಕಣಕ್ಕಿಳಿದಿರುವ ಅಜಯ್ ಮಿಶ್ರಾ ಪರ ಗೋಲಾ ಪಟ್ಟಣದಲ್ಲಿ ಹಾಗೂ ಧೌರಾಹ್ರ ಕ್ಷೇತ್ರದಿಂದ ಸ್ಪರ್ಧಿಸಿರುವ ರೇಖಾ ವರ್ಮಾ ಪರವಾಗಿ ಲಖೀಂಪುರ್ ಖೇರಿಯ ಮೊಹಮ್ಮದಿಯಲ್ಲಿ ಯೋಗಿ ಗುರುವಾರದಂದು ಪ್ರಚಾರ ನಡೆಸಿ, ಈ ಬಾರಿಯ ಲೋಕಸಭಾ ಚುನಾವಣೆಯು ರಾಮಭಕ್ತರು ಹಾಗೂ ರಾಮದ್ರೋಹಿಗಳ ನಡುವೆ ನಡೆಯುತ್ತಿದೆ ಎಂದು ಹೇಳಿದರು.
ಸಮಾಜವಾದಿ ಪಕ್ಷದ (ಎಸ್ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಹಾಗೂ ಅವರ ಕುಟುಂಬದ ನಾಲ್ವರು ಲೋಕಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಲಿದ್ದಾರೆ ಎಂದು ಭವಿಷ್ಯ ನುಡಿದರು. ಸಮಾಜವಾದಿ ಪಕ್ಷದ ಮುಖ್ಯಸ್ಥರ ಕುಟುಂಬ ಸದಸ್ಯರು ಎಲ್ಲಾ ಐದು ಕ್ಷೇತ್ರಗಳಲ್ಲಿ ಸೋಲು ಅನಭವಿಸಲಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಎಸ್ಪಿಯು ಉತ್ತರ ಪ್ರದೇಶದಲ್ಲಿ ಖಾತೆ ತೆರೆಯುವುದಿಲ್ಲ ಎಂದು ತಿಳಿಸಿದರು.
‘ರಾಮ ಮಂದಿರ ನಿರ್ಮಾಣ ಅನಗತ್ಯ ಎಂದು ಕಾಂಗ್ರೆಸ್ ಹಾಗೂ ಎಸ್ಪಿ ಪಕ್ಷದವರು ಹೇಳುತ್ತಿದ್ದಾರೆ. ಬಡವರಿಗೆ ಸವಲತ್ತು, ಕಲ್ಯಾಣ ಯೋಜನೆಗಳನ್ನು ನೀಡುವ ರಾಮಭಕ್ತರು ಒಂದು ಕಡೆ ಇದ್ದರೆ, ದೇಶದ ಭದ್ರತೆಗೆ ಧಕ್ಕೆ ಉಂಟುಮಾಡುತ್ತಿರುವ ಹಾಗೂ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ದೇಶವನ್ನು ಅವಮಾನಿಸುತ್ತಿರುವ ರಾಮ ವಿರೋಧಿಗಳು ಮತ್ತೊಂದೆಡೆ ಇದ್ದಾರೆ’ ಎಂದು ಯೋಗಿ ಕಿಡಿಕಾರಿದ್ದಾರೆ.
ಕಾಂಗ್ರೆಸ್ ಹಾಗೂ ಎಸ್ಪಿ ಪಕ್ಷಗಳು ದೇಶವನ್ನು ವಿಭಜಿಸುವ ಪಿತೂರಿ ನಡೆಸುತ್ತಿವೆ ಎಂದು ಆರೋಪಿಸಿರುವ ಮುಖ್ಯಮಂತ್ರಿ, ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ವಿಶ್ವದ ಪ್ರಬಲ ರಾಷ್ಟ್ರವಾಗುವತ್ತ ಭಾರತ ಮುನ್ನುಗ್ಗುತ್ತಿದೆ ಎಂದೂ ಹೇಳಿದ್ದಾರೆ.
ಸೀತಾಪುರದಲ್ಲಿಯೂ ವಿರೋಧ ಪಕ್ಷಗಳ ವಿರುದ್ಧ ಗುಡುಗಿದ ಯೋಗಿ, ಈ ಚುನಾವಣೆಯು ರಾಮಭಕ್ತರು ಹಾಗೂ ರಾಮದ್ರೋಹಿಗಳ ನಡುವೆ ನಡೆಯುತ್ತಿದೆ ಎಂದಿದ್ದಾರೆ.