ಬಂಟ್ವಾಳ: ಇಲ್ಲಿನ ನಗರ ಪೊಲೀಸ್ ಠಾಣೆಯ ಪೊಲೀಸರ ತಂಡವು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಕಾರ್ಯಾಚರಣೆಯಲ್ಲಿ ಕೇರಳ ರಾಜ್ಯದ ಕಾಸರಗೋಡು ತಾಲೂಕು ಕೂಡ್ಲು ಗ್ರಾಮದ ಚೂರಿ ಎಂಬಲ್ಲಿನ ಮೊಹಮ್ಮದ್ ಸಿ.ಎ ಹಾಗೂ ಶ್ರೀಮತಿ ಕಮರುನ್ನೀಸಾ ಎಂಬವರು ವಿನಿಮಯಕ್ಕಾಗಿ ಸ್ವಾಧೀನದಲ್ಲಿಟ್ಟುಕೊಂಡಿದ್ದ ಖೋಟಾ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣದ ವಿವರ: ದಿನಾಂಕ: 10.05.2024 ರಂದು ಕೇರಳ ರಾಜ್ಯದ ಕಾಸರಗೋಡು ತಾಲೂಕು ಕೂಡ್ಲು ಗ್ರಾಮದ ಚೂರಿ ಎಂಬಲ್ಲಿನ ಮೊಹಮ್ಮದ್ ಸಿ.ಎ ಹಾಗೂ ಶ್ರೀಮತಿ ಕಮರುನ್ನೀಸಾ ಎಂಬವರು KL 14-T-777 ನೇ ಕಾರಿನಲ್ಲಿ ಸ್ವಾಧೀನದಲ್ಲಿಟ್ಟುಕೊಂಡಿದ್ದ 500/- ರೂಪಾಯಿ ಮುಖಬೆಲೆ 46 ನೋಟುಗಳನ್ನು ಸ್ವಾಧೀನಪಡಿಸಿಕೊಂಡು ದಸ್ತಗಿರಿ ಮಾಡಿ ಪ್ರಕರಣ ದಾಖಲಿಸಿಕೊಂಡು ಮಾನ್ಯ ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿರುತ್ತದೆ. ಸದ್ರಿ ಆರೋಪಿಗಳನ್ನು ಬಂಟ್ವಾಳ ನಗರ ಪೊಲೀಸ್ ಠಾಣೆಯ ಪೊಲೀಸರು ಹೆಚ್ಚಿನ ತನಿಖೆ ನಡೆಸುವ ಬಗ್ಗೆ ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ಆರೋಪಿಗಳು ಅಸಲಿ ನೋಟುಗಳನ್ನಾಗಿ ಮಾಡಲು ಸ್ವಾಧೀನದಲ್ಲಿಟ್ಟುಕೊಂಡಿದ್ದ ಒಟ್ಟು 2,30,000/- ರೂಪಾಯಿ ಮೌಲ್ಯದ 500/- ರೂಪಾಯಿಯ 460 ನೋಟುಗಳನ್ನು ಹೀಗೆ ಒಟ್ಟು 2,53,000/- ರೂಪಾಯಿ ಮೌಲ್ಯದ 500/- ರೂಪಾಯಿ ಮುಖಬೆಲೆಯ 506 ಖೋಟಾ ನೋಟುಗಳನ್ನು ಹಾಗೂ 6 ಲಕ್ಷ ಮೌಲ್ಯದ ಕಾರನ್ನು ಸ್ವಾಧೀನಪಡಿಸಿಕೊಂಡು ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.
ಈ ಕಾರ್ಯಾಚರಣೆಯಲ್ಲಿ ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಸಿ.ಬಿ. ರಿಷ್ಯಾಂತ್, ಐ.ಪಿ.ಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಜಗದೀಶ್ ಮತ್ತು ರಾಜೇಂದ್ರ ಕೆ.ವಿ., ಬಂಟ್ವಾಳ ಉಪಾಧೀಕ್ಷಕರಾದ ವಿಜಯ ಪ್ರಸಾದ್ ರವರುಗಳ ಮಾರ್ಗದರ್ಶನದಲ್ಲಿ ಬಂಟ್ವಾಳ ನಗರ ಠಾಣಾ ಪೊಲೀಸ್ ನಿರೀಕ್ಷಕರಾದ ಅನಂತ ಪದ್ಮನಾಭ ರವರ ನೇತೃತ್ವದಲ್ಲಿ ಪೊಲೀಸ್ ಉಪ ನಿರೀಕ್ಷಕರಾದ ಆಂಜನೇಯ ರೆಡ್ಡಿ ಹಾಗೂ ರಾಮಕೃಷ್ಣ, ಸಿಬ್ಬಂದಿಗಳಾದ ರಾಜೇಶ್ ಎಸ್, ಇರ್ಷಾದ್ ಪಿ , ಮನೋಹರ, ಗಣೇಶ್, ಮೋಹನ್, ಬಸವರಾಜ್ ಕಮ್ಮಾರ್, ರಂಗನಾಥ್, ಕುಮಾರಿ ಅರ್ಪಿತಾ ರವರು ಸಹಕರಿಸಿರುತ್ತಾರೆ.
ಮಾನ್ಯ ಪೊಲೀಸ್ ಅಧೀಕ್ಷಕರು, ಪತ್ತೆ ತಂಡವನ್ನು ಪ್ರಶಂಸಿ ನಗದು ಬಹುಮಾನವನ್ನು ಘೋಷಿಸಿರುತ್ತಾರೆ.