ಚಿಕ್ಕಮಗಳೂರು: ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಯಡವಟ್ಟಿನಿಂದಾಗಿ ಒಂದೇ ಊರಿಗೆ ಎರಡೆರಡು ಸೇತುವೆ ಭಾಗ್ಯ ದೊರೆಯುವಂತಾಗಿದೆ.
ಒಂದು ಸೇತುವೆ ಕಾಮಗಾರಿ ಮುಕ್ತಾಯ ಹಂತಕ್ಕೆ ಬರುತ್ತಿದ್ದಂತೆಯೇ ಮತ್ತೊಂದು ಸೇತುವೆ ಕಾಮಗಾರಿ ಆರಂಭವಾಗಿದ್ದು ಊರಿಗೆ ಡಬಲ್ ಸೇತುವೆ ನೋಡಿ ಗ್ರಾಮಸ್ಥರು ಆಶ್ಚರ್ಯಪಟ್ಟಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಮುಂಡುಗದಮನೆ ಗ್ರಾಮದಲ್ಲಿ ಎರಡೆರಡು ಸೇತುವೆಗಳ ಕಾಮಗಾರಿ ನಡೆಯುತ್ತಿದ್ದು, ಗ್ರಾಮಕ್ಕೆ ಸಂಪರ್ಕಿಸಲು ಎರಡೆರಡು ಸೇತುವೆ ನಿರ್ಮಾಣ ಮಾಡಲಾಗುತ್ತಿದೆ.
2018ರಲ್ಲಿ ಆರಂಭವಾಗಿರುವ 38 ಲಕ್ಷ ರೂಪಾಯಿ ವೆಚ್ಚದ ಸೇತುವೆ ಕಾಮಗಾರಿ ಮುಗಿಯುತ್ತಾ ಬಂದಿದ್ದು, ದಿಢೀರ್ ಗುದ್ದಲಿ ಪೂಜೆ ನಡೆಸುವ ಮೂಲಕ ಎರಡು ಕೋಟಿ ರೂಪಾಯಿ ವೆಚ್ಚದ ಮತ್ತೊಂದು ಸೇತುವೆ ಕಾಮಗಾರಿ ಆರಂಭವಾಗಿದೆ.
ಮೊದಲ ಸೇತುವೆ ಪಕ್ಕದಲ್ಲೇ ಮತ್ತೊಂದು ಸೇತುವೆ ನಿರ್ಮಾಣ ಕಾಮಗಾರಿ ಆರಂಭವಾಗಿದ್ದು, ಮಳೆ ಬಂದಾಗ ದ್ವೀಪದಂತಾಗುತ್ತಿದ್ದ
20 ಮನೆಗಳಿರುವ ಮುಂಡುಗದಮನೆ ಗ್ರಾಮಕ್ಕೆ ಒಂದೇ ಸ್ಥಳದಲ್ಲಿ ಎರಡು ಸೇತುವೆ ಕಟ್ಟಲ್ಪಡುತ್ತಿದೆ.
ಕಳಸ ತಾಲೂಕಿನ ಬೇರೆ ಗ್ರಾಮದ ಅಭಿವೃದ್ಧಿ ಕೆಲಸಕ್ಕೆ ಹಣ ಬಳಸದೇ ಎರಡು ಕೋಟಿ ರೂಪಾಯಿ ಹಣ ಪೋಲು ಮಾಡುತ್ತಿದ್ದಾರೆ ಎಂದು ಗ್ರಾಮದ ಜನರಿಂದ ಆಕ್ರೋಶ ವ್ಯಕ್ತವಾಗಿದೆ.