ಪಾಟ್ನಾ: ಕಬ್ಬಿಣದ ರಾಡ್ ತುಂಬಿದ ಟ್ರಕ್ ವೊಂದು ಪಲ್ಟಿಯಾದ ಪರಿಣಾಮವಾಗಿ 16 ಕಾರ್ಮಿಕರಲ್ಲಿ 8 ಮಂದಿ ಸಾವನ್ನಪ್ಪಿದ ಘಟನೆ ಬಿಹಾರದ ಪೂರ್ಣಿಯಾದಲ್ಲಿ ನಡೆದಿದೆ.
ಕಾರ್ಮಿಕರೆಲ್ಲರೂ ರಾಜಸ್ಥಾನ ಮೂಲದವರೆಂದು ತಿಳಿದು ಬಂದಿದೆ. ಕಬ್ಬಿಣದ ರಾಡ್ ತುಂಬಿದ ಟ್ರಕ್ 16 ಕಾರ್ಮಿಕರನ್ನು ಹೊತ್ತುಕೊಂಡು ಸಿಲಿಗುರಿಯಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳುತ್ತಿತ್ತು. ಈ ಸಂದರ್ಭದಲ್ಲಿ ದೆಹಲಿಯ 4 ಲೇನ್ ರಾಷ್ಟ್ರೀಯ ಹೆದ್ದಾರಿ 57ರ ಜಲಾಲ್ ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಕಾಳಿ ದೇವಸ್ಥಾನದಲ್ಲಿ ಟ್ರಕ್ ಪಲ್ಟಿಯಾಗಿದ್ದು, ಅಪಘಾತದಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ.
ಅಧಿಕಾರಿಗಳು ಅಪಘಾತ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದು, ಮೃತ ದೇಹವನ್ನು ಹೊರತೆಗೆದಿದ್ದಾರೆ. ಗಾಯಾಳುಗಳನ್ನು ರಕ್ಷಿಸಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಿದ್ದಾರೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.
ಟ್ರಕ್ ಚಾಲಕ ಮತ್ತು ಸಹಾಯಕ ಅಪಘಾತ ನಡೆದ ಸ್ಥಳದಿಂದ ಪರಾರಿಯಾಗಿದ್ದು, ಅವರನ್ನು ಹಿಡಿಯುವ ಪ್ರಯತ್ನ ಮುಂದುವರಿದಿದೆ ಎಂದು ಪೋಲಿಸರು ತಿಳಿಸಿದ್ದಾರೆ.