ಹೈದರಾಬಾದ್: ಮಾಡಿದ ತಪ್ಪಿಗೆ ಶಿಕ್ಷೆ ತಪ್ಪಿದ್ದಲ್ಲ ಅನ್ನೋ ಮಾತು ಈ ಘಟನೆಗೆ ಸರಿಯಾಗಿ ಮ್ಯಾಚ್ ಆಗುತ್ತೆ.ಅಷ್ಟಕ್ಕೂ ಆಗಿದ್ದೇನು ಗೊತ್ತಾ ಖತರ್ನಾಕ್ ಕಳ್ಳನೊಬ್ಬ ಆಂಧ್ರಪ್ರದೇಶದ ಶ್ರೀಕಾಕುಳಂನ ಕರಾವಳಿ ಜಿಲ್ಲೆಯ ಜಾಮಿ ಯೆಲ್ಲಮ್ಮ ದೇವಸ್ಥಾನದಿಂದ ಆಭರಣಗಳನ್ನು ಕದಿಯಲು ದೇಗುಲಕ್ಕೆ ರಂಧ್ರ ಕೊರೆದಿದ್ದಾನೆ. ಕೊನೆಗೆ ಆ ರಂಧ್ರದಲ್ಲಿ ತಾನೇ ಸಿಲುಕಿಕೊಂಡಿದ್ದಾನೆ. ಪಾಪ ರಾವ್ (30) ಸಿಕ್ಕಿ ಬಿದ್ದ ಕಳ್ಳ.
ದೇವಸ್ಥಾನದ ಗೋಡೆಯಲ್ಲಿ ಕೊರೆದಿದ್ದ ರಂಧ್ರದಲ್ಲಿ ಸಿಲುಕಿ, ಹೊರಬರಲಾಗದೆ ಸಹಾಯಕ್ಕಾಗಿ ಕೂಗಾಡಲು ಆರಂಭಿಸಿದ ಕಳ್ಳ ಕೊನೆಗೆ ತಾನೇ ತೋಡಿದ ಹಳ್ಳಕ್ಕೆ ತಾನೇ ಬಿದ್ದಿದ್ದಾನೆ. ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಆಭರಣದೊಂದಿಗೆ ಪರಾರಿಯಾಗಲು ಯತ್ನಿಸಿದ ಆರೋಪಿ ರಂಧ್ರದಲ್ಲಿ ಸಿಲುಕಿಕೊಂಡಿದ್ದಾನೆ.
ಪಾಪ ರಾವ್ ದೇವಸ್ಥಾನದ ಕಿಟಕಿಯನ್ನು ಒಡೆದು ವಿಗ್ರಹಗಳಲ್ಲಿದ್ದ ಆಭರಣಗಳನ್ನು ದೋಚಿದ್ದ. ಅದಕ್ಕಾಗಿ ದೇವಸ್ಥಾನದ ಹೊರಗೆ ರಂಧ್ರವನ್ನು ಕೊರೆದಿದ್ದ. ಆದರೆ, ಚಿನ್ನಾಭರಣಗಳನ್ನು ದೋಚಿಕೊಂಡು ವಾಪಾಸ್ ಬರುವಾಗ ಅದೇ ರಂಧ್ರದಲ್ಲಿ ಸಿಲುಕಿಕೊಂಡಿದ್ದಾನೆ. ಪಾಪ್ ರಾವ್ ಸಹಾಯಕ್ಕಾಗಿ ಜೋರಾಗಿ ಕೂಗಿದ್ದರಿಂದ ಅಲ್ಲಿಗೆ ಬಂದ ಗ್ರಾಮಸ್ಥರಿಗೆ ಆ ಕಳ್ಳನೆಂಬುದು ಗೊತ್ತಾಗುತ್ತಿದ್ದಂತೆ ಆತನನ್ನು ಹೊರಗೆಳೆದು, ಪೊಲೀಸರಿಗೆ ಒಪ್ಪಿಸಿದ್ದಾರೆ.