ಉಡುಪಿ: ಪ್ರಥಮ ಸ್ವಾತಂತ್ರ್ಯೋತ್ಸವದಲ್ಲಿ ಆರೋಹಣಗೊಂಡ ರಾಷ್ಟ್ರಧ್ವಜ ಇಂದಿಗೂ ಕಲ್ಮಾಡಿಯ ಮನೆಯೊಂದರಲ್ಲಿ ಸುರಕ್ಷಿತವಾಗಿರೋ ವಿಚಾರ ಇದೀಗ ಬೆಳಕಿಗೆ ಬಂದಿದೆ.
1947ರಲ್ಲಿ ಸ್ವಾತಂತ್ರ್ಯ ಹೋರಾಟಗಾರ 96ರ ಹರೆಯದ ಉಡುಪಿಯ ದಿ.ಕೆ. ಗೋಪಾಲಕೃಷ್ಣ ಗುಂಡು ನಾಯಕ್ ಅವರು ಸಂತೆಕಟ್ಟೆಯಲ್ಲಿರುವ ತಮ್ಮ ಅಂಗಡಿಯ ಮೇಲೆ ಅಂದು ಧ್ವಜಾರೋಹಣ ಮಾಡಿದ್ದರು. ಅವರ ಕಾಲಾನಂತರ ಪ್ರಸ್ತುತ ಮಗ ಕೆ. ಮನೋಹರ ನಾಯಕ್ ಪ್ರತಿ ವರ್ಷ ಆ. 15ರಂದು ಮನೆ ಮುಂದೆ ಧ್ವಜಾರೋಹಣ ಮಾಡುತ್ತಿದ್ದಾರೆ. ಈ ಬಾರಿಯೂ ತ್ರಿವರ್ಣ ಧ್ವಜ ಹಾರಿಸಿ ವಿಶೇಷವಾಗಿ ಸಂಭ್ರಮಿಸಿದ್ದಾರೆ.ಅವಿವಾಹಿತ ಮನೋಹರ್ಗೆ ಈಗ 88 ವರ್ಷ. ಗುಜರಾತಿನ ವಡೋದರದಲ್ಲಿ ಪ್ರಿಂಟಿಂಗ್ ಪ್ರೆಸ್ನಲ್ಲಿ ಉದ್ಯೋಗದಲ್ಲಿದ್ದ ಅವರು ಪ್ರಸ್ತುತ ತಂಗಿ ರೇವತಿ ಶೆಣೈ ಮತ್ತು ಹೆಚ್.ಕೆ. ಶೆಣೈ ಅವರ ಕಲ್ಮಾಡಿಯ ಮನೆಯಲ್ಲಿ ವಾಸವಾಗಿದ್ದಾರೆ.
1934ರಲ್ಲಿ ಗಾಂಧೀಜಿ ಉಡುಪಿಗೆ ಬಂದ ವೇಳೆ ಅವರ ಜತೆ ಬಂದಿದ್ದ ಸ್ವಯಂಸೇವಕರಿಗೆ ನಿಲ್ಲಲು ಅಲ್ಲಲ್ಲಿ ಮನೆಗಳ ವ್ಯವಸ್ಥೆ ಮಾಡಿದರೆಂದು ಬ್ರಿಟಿಷರು ತಂದೆ ಗೋಪಾಲಕೃಷ್ಣರನ್ನು 4 ದಿನ ಜೈಲಿಗೆ ಹಾಕಿದ್ದರು ಎಂದು ಪುತ್ರ ಕೆ.ಮನೋಹರ್ ನಾಯಕ್ ನೆನಪಿಸುತ್ತಾರೆ.