ಮೈಸೂರು: ಈ ಬಾರಿಯ ವಿಜಯದಶಮಿ ಸಂಭ್ರಮ ಎಂದಿನಂತೆ ಇರುವುದಿಲ್ಲ. ಕೇವಲ 300 ಜನರು ಮಾತ್ರ ಈ ವಿಜಯದಶಮಿ ಸಂಭ್ರಮದಲ್ಲಿ ಭಾಗಿಯಾಗಲಿದ್ದು, ಕೇವಲ 40 ನಿಮಿಷದಲ್ಲಿ ಅರಮನೆ ಆವರಣದಲ್ಲಿ ಜಂಬೂ ಸವಾರಿ ಮುಗಿಯಲಿದ್ದು, ಸಾರ್ವಜನಿಕ ಪ್ರವೇಶ ನಿರ್ಬಂಧಿಸಲಾಗಿದೆ. ಅಲ್ಲದೇ ಅರಮನೆ ಸುತ್ತಮುತ್ತ ರಸ್ತೆಗಳಲ್ಲಿ ಸಂಚಾರಕ್ಕೆ ಅವಕಾಶ ನೀಡಲಾಗಿಲ್ಲ.
ಈ ಬಾರಿಯ ಜಂಬೂಸವಾರಿ ಮೆರವಣಿಗೆಗೆ ಅಭಿಮನ್ಯು ನೇತೃತ್ವದ ತಂಡದಿಂದ ನಡೆಯಲಿದೆ 750 ಕೆ. ಜಿ ತೂಕದ ಚಿನ್ನದ ಅಂಬಾರಿ ಹೊತ್ತು ಸಾಗಲಿರುವ ಅಭಿಮನ್ಯುವಿಗೆ, ವಿಜಯ ಮತ್ತು ಕಾವೇರಿ ಕುಮ್ಕಿ, ಗೋಪಿ ಮತ್ತು ವಿಕ್ರಮ ನೌಪತ್ ಹಾಗೂ ನಿಶಾನೆ ಆನೆಗಳಾಗಿ ಇಂದಿನ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗಿಯಾಗಲಿವೆ.
ಇಂದು ಮಧ್ಯಾಹ್ನ 2.59 ರಿಂದ 3.20 ರ ಮಕರ ಲಗ್ನದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಂದಿ ಧ್ವಜ ಪೂಜೆ ನಡೆಸಲಿದ್ದಾರೆ. ಇದಾದ ಬಳಿಕ 3.40 ರಿಂದ 4.15 ರವರೆಗಿನ ಕುಂಭ ಲಗ್ನದಲ್ಲಿ ನಾಡದೇವತೆ ಚಾಮುಂಡೇಶ್ವರಿಯನ್ನು ಹೊತ್ತ ಗಜಪಡೆ ಮೆರವಣಿಗೆ ನಡೆಸಲಿದೆ.