ಬೆಂಗಳೂರು: ಕಚೇರಿಯೊಂದರ ಉದ್ಘಾಟನೆ ವೇಳೆ ಬಂದ ಮಂಗಳಮುಖಿಯರ ತಂಡವೊಂದು ದೃಷ್ಟಿ ತೆಗೆತೀವಿ ಅಂತಾ ಹೇಳಿ ಚಿನ್ನಾಭರಣ, ಲಕ್ಷಾಂತರ ರೂ. ನಗದು ಮತ್ತು ಮೊಬೈಲ್ ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರಿನ ವಿದ್ಯಾರಣ್ಯಪುರದ ಈಚಲಮರ ಬಸ್ ಸ್ಟಾಪ್ ಬಳಿ ನಡೆದಿದೆ.
ಇನ್ನು ಆಟೋದಲ್ಲಿ ಬಂದಿದ್ದ ನಾಲ್ವರು ಮಂಗಳಮುಖಿಯರು ಚಿನ್ನ, ಹಣ ಲೂಟಿ ಮಾಡಿಕೊಂಡು ಪರಾರಿಯಾಗುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ವಿದ್ಯಾರಣ್ಯಪುರದ ಈಚಲಮರ ಬಸ್ ಸ್ಟಾಪ್ ಬಳಿ ಸೆ.23ರಂದು ಅನುವೃದ್ಧಿ ಕೋ ಆಪರೇಟಿವ್ ಕಚೇರಿಯ ಉದ್ಘಾಟನೆ ಕಾರ್ಯಕ್ರಮವಿತ್ತು. ಈ ವೇಳೆ ಶಾಖೆಯ ದ್ವಾರಕ್ಕೆ ದೃಷ್ಟಿ ತೆಗೆಯುವ ನೆಪದಲ್ಲಿ ಮಂಗಳಮುಖಿಯರ ಗ್ಯಾಂಗ್ ಎಂಟ್ರಿ ಕೊಟ್ಟಿತ್ತು. ನಿಂಬೆಹಣ್ಣಿನಿಂದ ದ್ವಾರಕ್ಕೆ ದೃಷ್ಟಿ ತೆಗೆದು ನಂತರ ದೇವರ ಫೋಟೋಗೆ ಅಕ್ಷತೆ ಹಾಕುವ ನೆಪದಲ್ಲಿ ಕಚೇರಿಯ ಒಳಗೆ ಹೋದ ಆ ಗ್ಯಾಂಗ್, ಅಲ್ಲಿದ್ದ 1.65 ಲಕ್ಷ ರೂ. ನಗದು, 23 ಗ್ರಾಂ ತೂಕದ 1 ಚಿನ್ನದ ಸರ, 1 ಮೊಬೈಲ್ ಎಗರಿಸಿಕೊಂಡು ಸಿನಿಮೀಯ ರೀತಿಯಲ್ಲಿ ಆಟೋ ಹತ್ತಿ ಎಸ್ಕೇಪ್ ಆದರು.
ಮೊದಲೇ ಪ್ರೀ ಪ್ಲಾನ್ ಮಾಡಿಕೊಂಡು ಆಟೋದಲ್ಲಿ ಈ ಖರ್ತನಾಕ್ ಗ್ಯಾಂಗ್ ಬಂದಿತ್ತು. ಘಟನೆ ಸಂಬಂಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಈ ಖರ್ತನಾಕ್ ತಂಡವನ್ನು ಪತ್ತೆ ಹಚ್ಚೋದಕ್ಕೆ ಬಲೆ ಬೀಸಿದ್ದಾರೆ.