
ಬಂಟ್ವಾಳ: ಮಾಣಿ ಸಮೀಪದ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಅಂತಿಮ ಹಂತ ತಲುಪುತ್ತಿರುವ ಬೆನ್ನಲ್ಲೇ ವಿವಿಧೆಡೆ ಅಳವಡಿಸಲಾಗಿರುವ ದಾರಿ ಸೂಚಕ ಫಲಕಗಳು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿವೆ. ಹಲವು ಕಡೆಗಳಲ್ಲಿ ಸ್ಥಳದ ಹೆಸರು ಮತ್ತು ದಿಕ್ಕುಗಳ ಕುರಿತು ತಪ್ಪು ಮಾಹಿತಿ ನೀಡಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಉದಾಹರಣೆಗೆ, ಸೂರಿಕುಮೇರು ಸಮೀಪದ ಹೈವೇ ಚಿಕನ್ ಸ್ಟಾಲ್ ಬಳಿ ‘ಬಾಳ್ತಿಲ’ಕ್ಕೆ ಹೋಗುವ ದಾರಿ ಎಂದು ಫಲಕ ಹಾಕಲಾಗಿದೆಯಾದರೂ, ವಾಸ್ತವದಲ್ಲಿ ಆ ರಸ್ತೆ ಕೇವಲ ಸ್ಥಳೀಯ ಯೂಸುಫ್ ಹಾಜಿ ಎಂಬುವವರ ಮನೆಗೆ ಮಾತ್ರ ತಲುಪುತ್ತದೆ. ಬಾಳ್ತಿಲ ಪಂಚಾಯತ್ಗೆ ಹೋಗುವ ಮಾರ್ಗವನ್ನು ಸೂಚಿಸಲು ‘ನೀರಪಾದೆ’ ರಸ್ತೆಯ ಬಳಿ ಫಲಕ ಅಳವಡಿಸಬೇಕಿತ್ತು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಇದಲ್ಲದೆ, ಎಲ್ಲ ಭಾಷೆಗಳಲ್ಲೂ ಸಾಮಾನ್ಯವಾಗಿ ‘ಬಿಸಿ ರೋಡ್’ ಎಂದೇ ಕರೆಯಲ್ಪಡುವ ಪ್ರಸಿದ್ಧ ಸ್ಥಳದ ಹೆಸರನ್ನು ಫಲಕದಲ್ಲಿ ‘ಬಿಸಿ ರಸ್ತೆ’ ಎಂದು ನಮೂದಿಸಿರುವುದು ತೀವ್ರ ಟೀಕೆ ಮತ್ತು ನಗೆಪಾಟಲಿಗೆ ಈಡಾಗಿದೆ. ಹೆದ್ದಾರಿ ಪ್ರಾಧಿಕಾರವು ಕಾಮಗಾರಿ ಮುನ್ನ ಸ್ಥಳೀಯ ಪಂಚಾಯತ್ ಸದಸ್ಯರು ಅಥವಾ ಮುಖಂಡರೊಂದಿಗೆ ಸಮಾಲೋಚನೆ ನಡೆಸದೆ ಈ ಎಡವಟ್ಟು ಮಾಡಿಕೊಂಡಿದ್ದು, ತಕ್ಷಣವೇ ಸ್ಥಳೀಯರ ಸಲಹೆ ಪಡೆದು ಈ ಎಲ್ಲಾ ತಪ್ಪುಗಳನ್ನು ಸರಿಪಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.


