ಬೆಂಗಳೂರು : ನಿನ್ನೆಯಷ್ಟೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಸಚಿವ ಸಿಟಿ ರವಿ ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿ ಆದೇಶಿಸಿದ್ದರು. ಇದರ ಬೆನ್ನಲ್ಲೇ ಇದೀಗ ಸ್ವತಃ ಸಿ ಟಿ ರವಿ ಅವರೇ, ರಾಜೀನಾಮೆ ಬಗ್ಗೆ ಮಾತನಾಡಿದ್ದಾರೆ.
ನಾನು ಪಕ್ಷ ಸೂಚಿಸಿದಾಗ ರಾಜೀನಾಮೆ ನೀಡುವೆ. ಪಕ್ಷ ಸಂಘಟನೆಯೇ ನನ್ನ ಮುಖ್ಯ ಗುರಿ. ಇಲ್ಲಿಯವರೆಗೂ ಪಕ್ಷದ ನಿಷ್ಠೆ ಬಿಟ್ಟಿಲ್ಲ. ಯಾವುದೇ ಜವಾಬ್ದಾರಿ ನೀಡಿದ್ರು ನಿರ್ವಹಿಸುತ್ತೇನೆ. ಪ್ರಧಾನ ಕಾರ್ಯದರ್ಶಿ ಸ್ಥಾನ ಸಿಕ್ಕಿದ್ದು ಪುಣ್ಯ ಎಂಬುದಾಗಿ ತಿಳಿಸಿದ್ದಾರೆ. ಈ ಮೂಲಕ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸುವ ದಿನದಂದೇ ಸಚಿವ ಸ್ಥಾನಕ್ಕೆ ಸಿಟಿ ರವಿ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗುತ್ತಿದೆ. ಆ ದಿನ ಅಕ್ಟೋಬರ್ 2 ಎಂಬುದಾಗಿ ಹೇಳಲಾಗುತ್ತಿದೆ.
ಇನ್ನು ಈ ಬಗ್ಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರೊಂದಿಗೂ ಸಚಿವ ಸಿಟಿ ರವಿ ಮಾತನಾಡಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಸಚಿವರಾಗಿ ಮುಂದುವರೆಯಲಿದ್ದು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಲು ದಿನಾಂಕ ಘೋಷಣೆಯಾದ ನಂತ್ರ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿರುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.