
ಮಂಗಳೂರು: ಗುರುವಾರ ಮತ್ತು ಶುಕ್ರವಾರ ಸುರಿದ ಭಾರೀ ಮಳೆಯಿಂದಾಗಿ ರಾಜ್ಯದ ಎರಡನೇ ಅತೀ ದೊಡ್ಡ ಕೈಗಾರಿಕಾ ಪ್ರಾಂಗಣವಾದ ಬೈಕಂಪಾಡಿ ಕೃತಕ ನೆರೆಗೆ ಸಿಲುಕಿದ್ದು, ಹಲವು ಕಾರ್ಖಾನೆಗಳ ಒಳಗೆ ನೀರು ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಯಂತ್ರೋಪಕರಣಗಳು ಹಾಗೂ ಕಚ್ಚಾ ವಸ್ತುಗಳು ಹಾನಿಗೊಳಗಾಗಿವೆ.
ಕೈಗಾರಿಕಾ ಪ್ರದೇಶದ ಸುತ್ತಮುತ್ತಲಿರುವ ರಾಜಕಾಲುವೆಗಳ ಅವೈಜ್ಞಾನಿಕ ನಿರ್ಮಾಣ, ಬೈಕಂಪಾಡಿ ಎಪಿಎಂಸಿ ವಲಯದ ಕಾಲುವೆಗಳಲ್ಲಿ ಕಸ ತುಂಬಿರುವುದು ಮತ್ತು ಸಮುದ್ರಕ್ಕೆ ಸೇರುವ ಮುಖ್ಯ ರಾಜಕಾಲುವೆಯನ್ನು ಸ್ವಚ್ಛಗೊಳಿಸದ ಕಾರಣ ಮಳೆನೀರು ಸರಾಗವಾಗಿ ಹರಿದುಹೋಗದೆ ಹಿಮ್ಮುಖವಾಗಿ ಕಂಪೆನಿಗಳ ಒಳಗೆ ನುಗ್ಗುತ್ತಿದೆ ಎಂದು ಉದ್ಯಮಿಗಳು ದೂರಿದ್ದಾರೆ.
ಪ್ರತಿ ವರ್ಷ ಮಳೆಗಾಲದಲ್ಲಿ ಎದುರಾಗುವ ಈ ಸಮಸ್ಯೆಗೆ ಜಿಲ್ಲಾಡಳಿತ ಹಾಗೂ ಸರ್ಕಾರದ ಗಮನಕ್ಕೆ ತಂದರೂ ಯಾವುದೇ ಶಾಶ್ವತ ಪರಿಹಾರ ಸಿಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ಉದ್ಯಮಿಗಳು, ಸರ್ಕಾರ ಕೂಡಲೇ ಉನ್ನತ ಮಟ್ಟದ ತಂಡವನ್ನು ಕಳುಹಿಸಿ ಸ್ಥಳ ಪರಿಶೀಲನೆ ನಡೆಸಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.


