ಆನೇಕಲ್: ಪ್ರತಿಷ್ಠಿತ ಕಾಲೇಜೊಂದರಲ್ಲಿ ಕಾನೂನು ಪದವಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ಕ್ಷುಲ್ಲಕ ಕಾರಣಕ್ಕೆ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಕಾವಲಹೊಸಹಳ್ಳಿ ಬಳಿ ನಡೆದಿದೆ. ಪ್ರತಿಷ್ಠಿತ ಅಲಯನ್ಸ್ ಯೂನಿವರ್ಸಿಟಿ ವಿದ್ಯಾರ್ಥಿ ಕೌಶಿಕ್(20) ನೇಣಿಗೆ ಶರಣಾದವನು.
ಕೌಶಿಕ್ ಮೂಲತಃ ತಮಿಳುನಾಡಿನ ಹೊಸೂರು ವಾಸಿಯಾಗಿದ್ದು, ಅಲಯನ್ಸ್ ಯೂನಿವರ್ಸಿಟಿಯಲ್ಲಿ ಕಾನೂನು ಪದವಿ ವ್ಯಾಸಂಗ ಮಾಡುತ್ತಿರುತ್ತಾನೆ. ನಿತ್ಯ ಪ್ರಯಾಣ ಕಷ್ಟ ಎಂದು ಸಮೀಪದ ಈಡನ್ ಬಡಾವಣೆಯಲ್ಲಿ ರೂಮ್ ಮಾಡಿಕೊಂಡು ವಾಸವಾಗಿರುತ್ತಾನೆ. ಕೊರೋನಾ ಹಿನ್ನೆಲೆಯಲ್ಲಿ ಕಾಲೇಜುಗಳು ಬಂದ್ ಆಗಿರುವ ಕಾರಣ ಹೊಸೂರಿನಲ್ಲಿ ವಾಸವಿದ್ದ ಕೌಶಿಕ್ ನಿನ್ನೆ ರಾತ್ರಿ ಸ್ನೇಹಿತನೊಂದಿಗೆ ಆನೇಕಲ್ಗೆ ಹೋಗಿ ಬರೋಣ ಎಂದು ಕಾರಿನಲ್ಲಿ ಬಂದಿದ್ದಾನೆ. ಆದ್ರೆ ಮಾರ್ಗ ಮಧ್ಯೆ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದು ನಜ್ಜುಗುಜ್ಜಾಗಿದೆ. ಅದೃಷ್ಟವಶಾತ್ ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದ ಕೌಶಿಕ್ ಮತ್ತು ಆತನ ಸ್ನೇಹಿತನನ್ನು ಆಟೋದಲ್ಲಿ ಸ್ಥಳೀಯರು ಆಸ್ಪತ್ರೆಗೆ ಕಳುಹಿಸಿದ್ದಾರೆ.
ಆಸ್ಪತ್ರೆಗೆ ಹೋಗದ ಕೌಶಿಕ್ ತನ್ನ ಸ್ನೇಹಿತನ ಜೊತೆ ನೇರವಾಗಿ ರೂಮ್ ಬಳಿ ಬಂದಿದ್ದಾನೆ. ಆದ್ರೆ ರೂಮ್ ಕೀ ಕಾರಿನಲ್ಲಿಯೇ ಬಿಟ್ಟು ಬಂದಿದ್ದರಿಂದ ಕಾಂಪೌಂಡ್ ಜಿಗಿದು ಹಿಂಬದಿಯ ಗಾಜು ಹೊಡೆದು ಒಳಗಿಂದ ಬಾಗಿಲು ತೆಗೆದಿದ್ದಾನೆ. ಬಳಿಕ ಸ್ನೇಹಿತನನ್ನು ಮಲಗುವಂತೆ ಹೇಳಿದ್ದಾನೆ. ಆದರೆ, ಕಾರು ಅಪಘಾತವಾಗಿದ್ದಕ್ಕೆ ಬೇಸರಗೊಂಡು ಕೌಶಿಕ್ ತನ್ನ ಕೊಠಡಿಯಲ್ಲಿ ಸಿಕ್ಕ ಸಿಕ್ಕ ವಸ್ತುಗಳನ್ನು ಹೊಡೆದು ಪುಡಿ ಮಾಡಿದ್ದಾನೆ.
ಸದ್ದು ಕೇಳಿ ಎಚ್ಚರಗೊಂಡ ಸ್ನೇಹಿತ ಕೊಠಡಿಯಿಂದ ಹೊರ ಬರಲು ಪ್ರಯತ್ನಿಸುದ್ದಾನೆ. ಆದ್ರೆ ಕೊಠಡಿ ಬಾಗಿಲು ಹೊರಗಿನಿಂದ ಚಿಲಕ ಹಾಕಿತ್ತು. ಕೊನೆಗೆ ಅಕ್ಕಪಕ್ಕದ ಮನೆಯವರ ನೆರವು ಪಡೆದು ಕೊಠಡಿಯಿಂದ ಒಳ ಬರುವಷ್ಟರಲ್ಲಿ ಕೌಶಿಕ್ ನೇಣಿಗೆ ಶರಣಾಗಿದ್ದನೆನ್ನಲಾಗಿದೆ. ಮೃತ ಕೌಶಿಕ್ ಸ್ನೇಹಿತ ನೀಡಿದ ಮಾಹಿತಿ ಮೇರೆಗೆ ಸ್ಥಳ ಪರಿಶೀಲನೆ ನಡೆಸಿದ ಆನೇಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.