ಬೆಳ್ತಂಗಡಿ : ತೋಟದಲ್ಲಿದ್ದ 8 ಅಡಿ ಉದ್ದದ ಹೆಬ್ಬಾವನ್ನು ಓಡಿಸಿಕೊಂಡು ಬಂದ 14 ಅಡಿ ಉದ್ದದ ಕಾಳಿಂಗ ಸರ್ಪ ಹಾಗೂ ಹೆಬ್ಬಾವು ಎರಡನ್ನೂ ಸ್ನೇಕ್ ಅಶೋಕ್ ಅವರು ರಕ್ಷಣೆ ಮಾಡಿ ಕಾಡಿಗೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಪಾದೆ ಮನೆಯ ಜೀವಂದರ್ ಜೈನ್ ಅವರ ಮನೆಯಲ್ಲಿ ಕಾಳಿಂಗ ಸರ್ಪ ಕಂಡು ಬಂದಿತ್ತು. ಸಂಜೆ ವೇಳೆ ಮನೆಯವರು ಸ್ನೇಕ್ ಅಶೋಕ್ ಅವರಿಗೆ ಕರೆ ಮಾಡಿ ವಿಚಾರ ತಿಳಿಸಿದ್ರು. ತಕ್ಷಣ ತಮ್ಮ ಸಹಾಯಕ ಪ್ರೇಮ್ ಸಾಗರ್ ಅವರನ್ನು ಕಳುಹಿಸಿದ್ದರು. ಈ ವೇಳೆ ಹೆಬ್ಬಾವು ಪತ್ತೆಯಾಗಿದೆ. ಅದನ್ನು ಹಿಡಿದಿದ್ದಾರೆ. ಆಗ ಮನೆಮಂದಿ ನಾವು ನೋಡಿದ್ದು ಕಾಳಿಂಗ ಸರ್ಪ ಎಂದಿದ್ದಾರೆ.
ತಕ್ಷಣ ಸ್ನೇಕ್ ಅಶೋಕ್ ಲಾಯಿಲ ಅವರು ಸ್ಥಳಕ್ಕೆ ಬಂದು ಕಾಳಿಂಗ ಸರ್ಪಕ್ಕಾಗಿ ತೋಟವೆಲ್ಲಾ ಹುಡುಕಾಟ ನಡೆಸಿದ್ದಾರೆ. ರಾತ್ರಿ ವೇಳೆ ತೆಂಗಿನ ಮರದ ಬುಡದಲ್ಲಿ ಅವಿತುಕೊಂಡಿದ್ದ ಕಾಳಿಂಗ ಸರ್ಪ ಪತ್ತೆಯಾಗಿದೆ. ಬಳಿಕ ಎರಡನ್ನೂ ರಕ್ಷಣೆ ಮಾಡಿ ಸುರಕ್ಷಿತವಾಗಿ ಕಾಡಿಗೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ.