ಬೈಂದೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ರೈತರು, ಮಹಿಳೆಯರು, ಯುವಕರಿಗೆ ಸಾಕಷ್ಟು ಸಾಲ ನೀಡಿ ಪ್ರಗತಿಪರ ಕಾರ್ಯದಲ್ಲಿ ತೊಡಗಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ. ನಿಗದಿತ ಗುರಿಗಿಂತ 116% ಸಾಲ ವಿತರಣೆ ಮಾಡಿ ಇತರೆ ಡಿಸಿಸಿ ಬ್ಯಾಂಕ್ ಗಳಿಗೆ ಎಸ್ ಸಿಡಿಸಿಸಿ ಬ್ಯಾಂಕ್ ಮಾದರಿಯಾಗಿದೆ ಸೋಮಶೇಖರ್ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನ ಉಪ್ಪುಂದ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಚಿವರು, 2021-22ನೇ ಸಾಲಿನಲ್ಲಿ ಎಸ್ ಸಿಡಿಸಿಸಿ ಬ್ಯಾಂಕ್ 1 ಲಕ್ಷ 54 ಸಾವಿರ ರೈತರಿಗೆ 1876 ಕೋಟಿ ರೂ. ಅಲ್ಪಾವಧಿ ಸಾಲ ನೀಡಿ, ಗುರಿಗಿಂತ ಹೆಚ್ಚು ಸಾಲ ವಿತರಿಸಿದೆ ಎಂದಿದ್ದಾರೆ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ 100% ಏಕರೂಪ ತಂತ್ರಾಂಶ ಅಳವಡಿಕೆ ಮಾಡಲಾಗಿದೆ. ರಾಜ್ಯದ ಇತರೆ ಜಿಲ್ಲೆಗಳಲ್ಲಿ ಏಕರೂಪ ತಂತ್ರಾಂಶ ಅಳವಡಿಸಲು ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷತೆಯಲ್ಲಿ ಕಮಿಟಿ ಕಾರ್ಯರೂಪಕ್ಕೆ ತರಲಾಗುವುದು ಎಂದು ಸಚಿವರು ತಿಳಿದಿದ್ದಾರೆ.
ಮೊದಲಿಗೆ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಕಂಪ್ಯೂಟರ್ ವಿತರಣೆ ಮಾಡಿ ಎರಡನೇ ಹಂತದಲ್ಲಿ ತಂತ್ರಾಂಶ ಅಳವಡಿಸಲಾಗುವುದು ಎಂದು ಸಹಕಾರ ಸಚಿವರು ಹೇಳಿದ್ದಾರೆ.