ಬೆಳ್ತಂಗಡಿ: ಇಲ್ಲಿನ ಪುದುವೆಟ್ಟುವಿನಲ್ಲಿ ಅಪ್ಪ ಮಗ ಸಾವು ಪ್ರಕರಣಕ್ಕೆ ಅಣಬೆ ಸೇವನೆ. ಕಾರಣ ಅನ್ನೋದು ಇದೀಗ ಬಯಲಾಗಿದೆ.ಕಾಡಿನ ವಿಷ ಪೂರಿತ ಅಣಬೆಯನ್ನು ಸೇವಿಸಿದ ಪರಿಣಾಮ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.ಪುದುವೆಟ್ಟು ಗ್ರಾಮದ ಮೀಯಾರುಪಾದೆ ಕೇರಿಮಾರು ನಿವಾಸಿಗಳಾದ ಗುರುವ(75) ಹಾಗೂ ಇವರ ಪುತ್ರ ಓಡಿ(45) ಮೃತಪಟ್ಟವರು.
ತೀರಾ ಬಡ ಕುಟುಂಬದ ಮನೆಯಲ್ಲಿ ಗುರುವ ಸಹಿತ ಇಬ್ಬರು ಮಕ್ಕಳು ವಾಸವಾಗಿದ್ದರು. ಮಂಗಳವಾರ ಇವರ ಇಬ್ಬರ ಮೃತದೇಹ ಮನೆ ಮುಂಭಾಗ ಬಿದ್ದಿರುವುದನ್ನು ಸ್ಥಳೀಯರು ಕಂಡು ಆತಂಕಕ್ಕೀಡಾಗಿದ್ದರು.ಪರಿಶೀಲಿಸಿದಾಗ ಸೋಮವಾರ ರಾತ್ರಿ ಕಾಡಿನ ಯಾವುದೋ ವಿಷಪೂರಿತ ಅಣಬೆಯನ್ನು ಅಡುಗೆ ಮಾಡಿ ಸೇವಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.ಇದರಿಂದ ಅನಾಹುತ ಸಂಭವಿಸಿದೆ. ಮತ್ತೋರ್ವ ಮಗ ಮನೆಯಲ್ಲಿ ಇಲ್ಲದ್ದರಿಂದ ಮತ್ತೊಂದು ಅವಘಡ ತಪ್ಪಿದೆ.
ಘಟನೆ ವಿಚಾರ ತಿಳಿದು ಸ್ಥಳೀಯ ಜನಪ್ರತಿನಿಧಿಗಳು, ಸಾರ್ವಜನಿಕರು ಜಮಾಯಿಸಿದ್ದಾರೆ. ಸ್ಥಳಕ್ಕೆ ಧರ್ಮಸ್ಥಳ ಪೊಲೀಸ್ ಠಾಣೆಯ ಪಿಎಸ್ಐ ಅನಿಲ್ ಕುಮಾರ್ ಡಿ ಮತ್ತು ತಂಡ ಭೇಟಿ ನೀಡಿದ್ದು. ಶವವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಘಟನೆ ಬಗ್ಗೆ ತನಿಖೆ ಬಳಿಕ ಸ್ಪಷ್ಟವಾಗಿ ಮಾಹಿತಿ ತಿಳಿದು ಬರಬೇಕಿದೆ.