ಬೆಂಗಳೂರು: ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ ರಕ್ಷಿತ್ ಶೆಟ್ಟಿ ಮತ್ತೊಮ್ಮೆ ಸಿನಿಮಾ ನಿರ್ದೇಶನಕ್ಕೆ ರೆಡಿಯಾಗಿದ್ದು, ಇಂದು ಚಿತ್ರದ ಟೈಟಲ್ ಲಾಂಚ್ ಮಾಡಿದ್ದಾರೆ.
ರಿಚರ್ಡ್ ಆಂಟನಿ ಎಂಬ ನೂತನ ಚಿತ್ರವನ್ನು ಘೋಷಣೆ ಮಾಡಿದ್ದು ಇದಕ್ಕೆ ಸ್ವತಃ ರಕ್ಷಿತ್ ಶೆಟ್ಟಿ ನಾಯಕರಾಗಲಿದ್ದಾರೆ ಹಾಗೂ ತಾವೇ ಕಥೆ ಬರೆದು ನಿರ್ದೇಶಿಸಲಿದ್ದಾರೆ. ಹೊಂಬಾಳೆ ಫಿಲ್ಸಂ ಟೈಟಲ್ ಕಾರ್ಡ್ನ್ನು ಬಿಡುಗಡೆ ಮಾಡಿದೆ.
ಕೆಲ ದಿನಗಳ ಹಿಂದಷ್ಟೇ ಹೊಂಬಾಳೆ ಫಿಲ್ಮ್ಸ್ 9ನೇ ಸಿನಿಮಾ ‘ದ್ವಿತ್ವ’ವನ್ನು ಘೋಷಿಸಿತ್ತು. ಪುನೀತ್ ರಾಜ್ಕುಮಾರ್ ನಾಯಕನಾಗಿ ಪವನ್ ಕುಮಾರ್ ನಿರ್ದೇಶನದ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಇದೀಗ ಸಂಸ್ಥೆಯ 10ನೇ ಸಿನೆಮಾವಾಗಿ ವಿಜಯ್ ಕಿರಗಂದೂರು ಅವರು ರಕ್ಷಿತ್ ಶೆಟ್ಟಿ ಜೊತೆ ಕೈ ಜೋಡಿಸಿದ್ದಾರೆ.
ಉಳಿದವರು ಕಂಡಂತೆ ಚಿತ್ರದ ‘ರಿಚ್ಚಿ’ ಪಾತ್ರದ ಮುಂದುವರಿದ ಭಾಗವೇ ‘ರಿಚರ್ಡ್ ಆಂಟನಿ’ ಎನ್ನಲಾಗಿದೆ. ಇಂದು ಸೋಷಿಯಲ್ ಮೀಡಿಯಾ ಮೂಲಕ ಖುಷಿಯ ವಿಚಾರವನ್ನು ಹಂಚಿಕೊಂಡಿರುವ ರಕ್ಷಿತ್ ಶೆಟ್ಟಿಯವರು, ‘ಮೊದಲು ನಮ್ಮ ಕೆಲಸ ಮಾತಾಡಲಿ, ಉಳಿದವೆಲ್ಲ ತದನಂತರ… ‘ರಿಚರ್ಡ್ ಆಂಟನಿ’- ಮುಂದಿನ ಅಲೆ.. ನಿಮ್ಮ ಹೃದಯದ ದಡದಲ್ಲಿ ಜಾಗವಿರಿಸಿ.. ಸದಾ ನಿಮ್ಮ ಪ್ರೀತಿಯ ಆಶೀರ್ವಾದವಿರಲಿ’ ಎಂದು ಹೇಳಿಕೊಂಡಿದ್ದಾರೆ.
ಇತ್ತೀಚೆಗೆ ಖಾಸಗಿ ಸುದ್ದಿ ವಾಹಿನಿಯೊಂದರ ವಿರುದ್ಧ ಅಸಮಾಧಾನ, ಆಕ್ರೋಶ ಹೊರಹಾಕಿದ್ದ ನಟ ರಕ್ಷಿತ್ ಶೆಟ್ಟಿ ಜುಲೈ 11ಕ್ಕೆ ಉತ್ತರ ಕೊಡುತ್ತೇನೆ ಎಂದಿದ್ದರು. ಸದ್ಯ ಟೈಟಲ್ ಲಾಂಚ್ ಮಾಡುವ ಮೂಲಕ ಸುದ್ದಿ ವಾಹಿನಿ ಪ್ರಸಾರಿಸಿದ ವಿವಾದಗಳಿಗೆ ತೆರೆ ಎಳೆದಿದ್ದಾರೆ.