ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾಧ್ರಾ, ನವದೆಹಲಿಯಲ್ಲಿರುವ ತಮ್ಮ ಅಧಿಕೃತ ಸರ್ಕಾರಿ ಬಂಗಲೆಯನ್ನು ತೆರವುಗೊಳಿಸಿದ್ದಾರೆ.
ಆಗಸ್ಟ್ 1 ರ ಬಳಿಕ ಭದ್ರತಾ ಕಾರಣಕ್ಕೆ ನೀಡಿದ್ದ ಸರ್ಕಾರಿ ಬಂಗಲೆಯಲ್ಲಿ ಉಳಿದರೆ ದಂಡ ಹಾಗೂ ಬಾಡಿಗೆ ಕಟ್ಟಬೇಕು ಎಂಬ ಎಚ್ಚರಿಕೆ ಬೆನ್ನಲ್ಲೇ ಕೊನೆಗೂ ವಿವಾದಕ್ಕೆ ಅಂತ್ಯಹಾಡಿದ್ದಾರೆ ಪ್ರಿಯಾಂಕಾ.
ಲೋದಿ ಎಸ್ಟೇಟ್ 25 ಮನೆ ಖಾಲಿ ಮಾಡುವ ಮುನ್ನ ಬಾಕಿ ಉಳಿಸಿದ್ದ ನೀರಿನ ಬಿಲ್, ವಿದ್ಯುತ್ ಬಿಲ್ ಪಾವತಿಸಿದ್ದಾರೆ. ಬಳಿಕ ಮನೆ ಕೀಯನ್ನು ಹಸ್ತಾಂತರಿಸಿದ್ದಾರೆ. ಅವರು, ಸುಮಾರು ರೂ.3,46,677 ಹಣವನ್ನು ಬಾಕಿ ಉಳಿಸಿಕೊಂಡಿದ್ದರು.
ಒಂದು ತಿಂಗಳ ಒಳಗಾಗಿ ಲೋಧಿ ಎಸ್ಟೇಟ್ನಲ್ಲಿರುವ ಸರ್ಕಾರಿ ಬಂಗಲೆಯನ್ನು ತೊರೆಯುವಂತೆ ಕೇಂದ್ರ ಸರ್ಕಾರ ಪ್ರಿಯಾಂಕಾ ಗಾಂಧಿ ಅವರಿಗೆ ನೋಟಿಸ್ ನೀಡಿತ್ತು. ಅಲ್ಲದೇ ಆಗಸ್ಟ್ 1 ರ ಬಳಿಕವೂ ಸರ್ಕಾರಿ ಬಂಗಲೆಯಲ್ಲಿ ಉಳಿದರೆ ಹಾನಿ ಶುಲ್ಕ ಹಾಗೂ ದಂಡದ ರೂಪದಲ್ಲಿ ಬಾಡಿಗೆ ಶುಲ್ಕ ಕಟ್ಟಬೇಕು ಎಂದು ಆದೇಶಿಸಲಾಗಿತ್ತು.
ಈ ಆದೇಶದ ಅನ್ವಯ ಬಂಗಲೆ ತೆರವು ಮಾಡಿದ್ದು. ಮನೆ ಕೀಯನ್ನು ಸೆಂಟ್ರಲ್ ಪಬ್ಲಿಕ್ ವರ್ಕ್ಸ್ ಡಿಪಾರ್ಟ್ಮೆಂಟ್ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ಈ ಬಂಗಲೆಯನ್ನು ರಾಜ್ಯ ಸಭಾ ಸದಸ್ಯ ಹಾಗೂ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅನಿಲ್ ಬಾಲುನಿ ಅವರಿಗೆ ನೀಡಲಾಗಿದೆ. ತಮಗೆ ಬಂಗಲೆ ಬೇಕು ಎಂದು ಅವರು ಇಟ್ಟಿದ್ದ ಬೇಡಿಕೆಯನ್ನು ಪಕ್ಷ ಅಂಗೀಕರಿಸಿದೆ. ಕಳೆದ ವಾರ ಪ್ರಿಯಾಂಕಾ ಗಾಂಧಿ ಬಾಲುನಿ ಅವರಿಗೆ ಕರೆದು ಚಹಪಾರ್ಟಿಯನ್ನೂ ಕೊಟ್ಟಿದ್ದರು.