ಬೆಂಗಳೂರು: ರಾಜ್ಯದ ಪ್ರತಿ ತಾಲ್ಲೂಕಿನಲ್ಲಿ ವಿವಿಧ ಉದ್ದೇಶಗಳ ಮಹಿಳಾ ಸಹಕಾರಿ ಸಂಘಗಳನ್ನು ಸರ್ಕಾರದ ಶೇಕಡಾ 90 ರಷ್ಟು ಷೇರು ಬಂಡವಾಳದೊಂದಿಗೆ ಪ್ರಾರಂಭ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಇಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ ವತಿಯಿಂದ ಸಹಕಾರ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಿಎಂ ಬೊಮ್ಮಾಯಿ ಮಾತನಾಡಿದರು.
ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನರು ಸಹಕಾರ ರಂಗದ ವಿವಿಧ ಸಂಘ ಸಂಸ್ಥೆಗಳಲ್ಲಿ ಸದಸ್ಯರಾಗುವಂತೆ ಉತ್ತೇಜಿಸಲು ಸದಸ್ಯತ್ವ ಶುಲ್ಕವನ್ನು ಸರ್ಕಾರದಿಂದ ಪಾವತಿಸಲಾಗುವುದು. ದುಡಿಯುವ ವರ್ಗ, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಾಗ ಮಾತ್ರ ಸಹಕಾರಿ ರಂಗ ಯಶಸ್ವಿಯಾಗುತ್ತದೆ. ಮಹಿಳೆಯರು ದುಡಿಮೆಯ ಕ್ಷಮತೆಯುಳ್ಳವರು, ಅವರಿಂದ ರಾಜ್ಯದ ತಲಾವಾರು ಆದಾಯ ಹೆಚ್ಚಾಗುವುದಲ್ಲದೇ ರಾಜ್ಯದ ಆರ್ಥಿಕತೆಯೂ ಹೆಚ್ಚುತ್ತದೆ. ಸಹಕಾರ ರಂಗದಲ್ಲಿ ಬದ್ಧತೆ,ಪ್ರಾಮಾಣಿಕತೆ, ಶ್ರದ್ಧೆ ಹಾಗೂ ಶ್ರಮ ಬಹಳ ಮುಖ್ಯ. ಸಹಕಾರಿ ಕ್ಷೇತ್ರ ಬೆಳೆದರೆ ರಾಜ್ಯ ನಂ.1 ಆಗುತ್ತದೆ. ಸಹಕಾರಿ ಕ್ಷೇತ್ರದಿಂದ ಔದ್ಯೋಗಿಕ ಕ್ರಾಂತಿಯನ್ನು ಮಾಡಲಾಗುವುದು ಎಂದು ಸಿಎಂ ತಿಳಿಸಿದರು.
ಇದೇ ವೇಳೆ ಉತ್ಪಾದನೆಯ ಲಾಭ ಹಾಲು ಉತ್ಪಾದಕರಿಗೆ ಹೋಗಬೇಕೆನ್ನುವ ದೃಷ್ಟಿಯಿಂದ ಹಾಲು ಉತ್ಪಾದಕರ ಬ್ಯಾಂಕ್ ಸ್ಥಾಪನೆ ಮಾಡಲು ಸರ್ಕಾರ ಬಜೆಟ್ ನಲ್ಲಿ 100 ಕೋಟಿ ಅನುದಾನ ನೀಡಿ ಕ್ಷೀರ ಸಮೃದ್ಧಿ ಬ್ಯಾಂಕ್ ಸ್ಥಾಪನೆಗೆ ನಿರ್ಧಾರ ಮಾಡಿದ್ದು, ಕಾರ್ಯಾದೇಶವನ್ನು ಅತಿ ಶೀಘ್ರವಾಗಿ ನೀಡಲಿದೆ .ಪ್ರತಿ ತಾಲ್ಲೂಕಿನಲ್ಲಿ ಬ್ಯಾಂಕ್ ಇರಲಿದ್ದು, ಅವರಿಗೆ ಸುಲಭದಲ್ಲಿ ಮತ್ತು ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.