ರಾಮನಗರ : ಕೊರೊನಾ ಮಹಾಮಾರಿ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದ್ದರೆ ಮತ್ತೊಂದು ಕಡೆ ಜನರಲ್ಲಿ ಭಯ ಹಾಗೂ ಆತಂಕ ಕೂಡ ಜಾಸ್ತಿಯಾಗುತ್ತಿದೆ. ಇವತ್ತು ಕೊರೊನಾ ಸೋಂಕು ಬರೋದಕ್ಕಿಂತ ಮುಂಚೆನೇ ಅದರ ಭಯದಿಂದ ಆರೋಗ್ಯ ಕೆಡಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಾಗಿ ಕೊರೊನಾ ಭಯದಿಂದ ಜನ ಮೊದಲು ಹೊರ ಬರಬೇಕು. ನಮಗೆ ಕೊರೊನಾ ಬಂದರೂ ನಮ್ಮಲ್ಲಿ ಧೈರ್ಯ ಇದ್ದರೆ ಕೋವಿಡ್ ನ್ನು ಸುಲಭವಾಗಿ ಜಯಿಸಬಹುದು.
ಕೊರೊನಾ ಸೋಂಕಿತರಿಗೆ ಚಿಕಿತ್ಸೆಗಿಂತ ಹೆಚ್ಚಾಗಿ ನಾವು ಅವರಲ್ಲಿ ಆತ್ಮಸ್ಥೈರ್ಯ ತುಂಬ ಕೆಲಸ ಮಾಡಬೇಕು. ಹಾಗಾಗಿ ತಮ್ಮ ಕ್ಷೇತ್ರದ ಕೊರೊನಾ ಸೋಂಕಿತರಿಗೆ ಧೈರ್ಯ ತುಂಬ ನಿಟ್ಟಿನಲ್ಲಿ ಸಂಸದ ಡಿ.ಕೆ. ಸುರೇಶ್, ನಿನ್ನೆ ಸಂಜೆ ರಾಮನಗರ ಜಿಲ್ಲಾ ಕೋವಿಡ್ ಚಿಕಿತ್ಸಾ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಸೋಂಕಿತರು, ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿಗಳ ಜತೆ ಮಾತುಕತೆ ನಡೆಸಿದರು ಹಾಗೇ ಅವರ ಸಮಸ್ಯೆಗಳನ್ನು ಆಲಿಸಿದರು. ಹೆದರಬೇಡಿ ನಾನಿದ್ದೇನೆ ಎಂದು ಧೈರ್ಯ ಹೇಳಿದರು. ಆತ್ಮವಿಶ್ವಾಸ ತುಂಬಿದರು. ಪಿಪಿಇ ಕಿಟ್ ಧರಿಸಿ ಅಲ್ಲಿ ಚಿಕಿತ್ಸೆ ಪಡೆಯುತ್ತಿರುವ 131 ಸೋಂಕಿತರ ಸಮಸ್ಯೆ, ಪರಿಸ್ಥಿತಿ ಹಾಗೂ ಆರೋಗ್ಯ ವಿಚಾರಿಸಿದರು. ಈ ಸಂದರ್ಭದಲ್ಲಿ ಸೋಂಕಿತರೊಂದಿಗೆ ಮಾತುಕತೆ ನಡೆಸಿದ ಸುರೇಶ್ ಅವರು, ‘ಸೋಂಕಿತರಾಗಿದ್ದೇವೆ ಎಂದು ಹೆದರಬೇಡಿ. ನಿಮಗೆ ಅಗತ್ಯ ಚಿಕಿತ್ಸೆ ಮತ್ತಿತರ ವ್ಯವಸ್ಥೆ ಕಲ್ಪಿಸಲಾಗುವುದು. ನಿಮ್ಮ ಜತೆ ನಾನಿದ್ದೇನೆ. ನಿಮಗೆ ಬೇಕಾದ ಸಿಗುವಂತೆ ನೋಡಿಕೊಳ್ಳಲಾಗುವುದು’ ಎಂದರು.