ಬೆಂಗಳೂರು: ಕೊರೋನಾ ಭೀತಿಯಿಂದಾಗಿ ಎಲ್ಲಾ ಪರೀಕ್ಷೆಗಳನ್ನೂ ಮುಂದೂಡಲಾಗಿದ್ದು, ತೆಲಂಗಾಣದಲ್ಲಿ ಹಾಗೂ ತಮಿಳುನಾಡಿನಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯನ್ನೇ ರದ್ದುಗೊಳಿಸಲಾಗಿದೆ. ಹೀಗಾಗಿ ಕರ್ನಾಟಕದಲ್ಲಿ 10ನೇ ತರಗತಿ ಪರೀಕ್ಷೆ ನಡೆಯುತ್ತದೆಯೇ? ರದ್ದಾಗುತ್ತದೆಯೇ? ಎಂಬ ಪ್ರಶ್ನೆಯಂತೂ ಎದುರಾಗಿದೆ.
ಈ ಪ್ರಶ್ನೆಗೆ ಖುದ್ದಾಗಿ ಉತ್ತರಿಸಿದ ಶಿಕ್ಷಣ ಸಚಿವರಾದ ಎಸ್. ಸುರೇಶ್ ಕುಮಾರ್ ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ರದ್ದು ಮಾಡಲಾಗದು ಎಂದು ಸ್ಪಷ್ಟನೆ ನೀಡಿದ್ದಾರೆ.
ಈಗಾಗಲೇ ಪರೀಕ್ಷಾ ದಿನಾಂಕ ನಿಗದಿಯಾಗಿದ್ದು, ವೇಳಾಪಟ್ಟಿಯಂತೆಯೇ ಪರೀಕ್ಷೆ ನಡೆಯಲಿದೆ. ನಿರ್ಧಾರ ಬದಲಾಯಿಸುವ ಮಾತೇ ಇಲ್ಲ ಎಂದರು. ಜೂನ್ 25ರಿಂದ ಜುಲೈ 4ರವರೆಗೆ ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ದತೆ ನಡೆಸಿಕೊಳ್ಳಿ ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿಕೆ ನೀಡಿದ್ದಾರೆ.
SSLC ಪರೀಕ್ಷೆಗೆ ತಡೆಕೋರಿ ಪೋಷಕರಿಂದ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ
ಕೊರೋನಾ ಭೀತಿಯ ಹಿನ್ನಲೆಯಲ್ಲಿ ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ತಡೆ ನೀಡುವಂತೆ ಹೈಕೋರ್ಟ್ ಗೆ ಸಾರ್ವಜನಿಕ ಅರ್ಜಿಯೊಂದನ್ನು ಹಾಕಲಾಗಿತ್ತು. ಆದ್ರೇ ಈ ಅರ್ಜಿಯನ್ನು ಹೈಕೋರ್ಟ್ ಪೀಠ ತಡೆ ನೀಡಲು ನಿರಾಕರಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ, ಇದೀಗ ಪೋಷಕರಾದ ರಾಜಶ್ರೀ ಎಂಬುವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಮೂಲಕ ಜೂನ್ 25ರಂದು ನಿಗಧಿಯಾಗಿರುವ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಯುತ್ತೋ ಇಲ್ಲವೋ ಎಂಬ ಗೊಂದಲಕ್ಕೆ ಒಳಗಾಗುವಂತೆ ಆಗಿದೆ.