ಸಂಗೀತ ಮಾಂತ್ರಿಕ ಮನೋಮೂರ್ತಿಇದೀಗ ಕೋಸ್ಟಲ್ವುಡ್ಗೆ ಎಂಟ್ರಿಯಾಗಿದ್ದಾರೆ. ವೀರೇಂದ್ರ ಶೆಟ್ಟಿ ಕಾವೂರು ನಿರ್ಮಾಣ, ನಿರ್ದೇಶನದ ‘ಮಗನೇ ಮಹಿಷ’ ತುಳು ಸಿನಿಮಾದ ಮೂಲಕ ಮನೋಮೂರ್ತಿ ತುಳು ಭಾಷೆಯ ಚಿತ್ರವೊಂದಕ್ಕೆ ಮೊಟ್ಟ ಮೊದಲ ಬಾರಿಗೆ ಸಂಗೀತ ನೀಡಿದ್ದು, ಇದರ ಹಿನ್ನೆಲೆ ಸಂಗೀತ ಹಾಗೂ ಹಾಡುಗಳಿಗೆ ತುಳುವರು ಫಿದಾ ಆಗಿದ್ದಾರೆ. ‘ಮಗನೇ ಮಹಿಷ’ ಸಿನಿಮಾಕ್ಕೆ ಕೂಡ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ.
ಮಗನೇ ಮಹಿಷ’ದಲ್ಲಿ ನಾಲ್ಕು ಸಾಂಗ್ಗಳಿವೆ. ವೀರೇಂದ್ರ ಶೆಟ್ಟಿ ಸಾಹಿತ್ಯದ ಅನುರಾಧಾ ಭಟ್ ಹಾಡಿರುವ ‘ಚಂದನ ಸಿರಿ ನಡು ನಂದನೊಡು ಕೃಷ್ಣನ ಶೃಂಗಾರ….’ ಎಂಬ ಶಾಸ್ತ್ರೀಯ ಹಾಡಿನ ಸಂಗೀತ ತುಳುವರ ಮನಸ್ಸಿನಾಳಕ್ಕೆ ತಲುಪಿದರೆ, ವಿಜಯಕುಮಾರ್ ಕೊಡಿಯಾಲ್ಬೈಲ್ ಸಾಹಿತ್ಯದ ಪ್ರಶಾಂತ್ ಕಂಕನಾಡಿ ಹಾಡಿರುವ ‘ಕನನಾ, ನಿಜನಾ, ಭ್ರಮೆನಾ ಮದಪಂದಿನ…. ಈ ತುಳು ಮಾಣಿಕ್ಯ ಒಂಜೇ ಬೈದಿನ…’ ಎಂಬ ಪಾರ್ಟಿ ಸಾಂಗ್ ಮಾಸ್ಗೆ ತಲುಪಿದೆ.
ತುಳು, ಕನ್ನಡ ಸಿನಿಮಾ ರಂಗದ ಸುಮಾರು 100ಕ್ಕೂ ಹೆಚ್ಚು ಕಲಾವಿದರು, ತಂತ್ರಜ್ಞರು ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದು ಈ ಹಾಡಿನ ವಿಶೇಷತೆ. ರಕ್ಷಣ್ ಮಾಡೂರು ಸಾಹಿತ್ಯ ಹಾಗೂ ಸಿರಿ ಕಂಠದಲ್ಲಿ ಮೂಡಿಬಂದಿರುವ ‘ಮಗನೇ ಮಹಿಷ’ದ ಟೈಟಲ್ ಸಾಂಗ್ ‘ಮೂಜಿ ಮುಕ್ಕಾಲ್ ಘಳಿಗೆಡ್….ನಮ್ಮ ಪುನ ಗುಂಡಿಡ್….’ ಹಾಡು ಸಿನಿಮಾಕ್ಕೆ ಶಕ್ತಿ ತುಂಬಿದೆ. ಸಾಂಪ್ರದಾಯಿಕ ಹಾಡಾಗಿರುವ ‘ಐಗಿರಿ ನಂದಿನಿ ನಂದಿತ ಮೇದಿನಿ ವಿಶ್ವ ವಿನೋದಿನಿ ನಂದಿನುತೇ….’ ಸಾಂಗ್ ರೀಮಿಕ್ಸ್ ರೂಪದಲ್ಲಿ ಜಯಶ್ರೀ ಏರುಕಂಠದಲ್ಲಿ ಹಾಡಿದ್ದು, ಇದು ಅದ್ಭುತವಾಗಿ ಮೂಡಿ ಬಂದಿದೆ.
ಎಲ್ಲಾ ಹಾಡುಗಳ ಸಂಗೀತ ವಿನೂತನವಾಗಿದ್ದು, ಮನೋಮೂರ್ತಿ ತುಳು ಭಾಷೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. ಅಂದಹಾಗೆ ಈ ಸಿನಿಮಾದಲ್ಲಿ ದೇವದಾಸ್ ಕಾಪಿಕ್ಕಾಡ್, ನವೀನ್ ಪಡೀಲ್, ಭೋಜ ರಾಜ್ ವಾಮಂಜೂರು, ಅರವಿಂದ ಬೋಳಾರ್, ಉಮೇಶ್ ಮಿಜಾರ್, ಶಿವಧ್ವಜ್, ಜ್ಯೋತಿ ರೈ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ಸಂಗೀತವು ಭಾಷೆಯನ್ನು ಮೀರಿದ್ದು, ‘ಮಗನೇ ಮಹಿಷ’, ತುಳು ಸಿನಿಮಾ ಜೊತೆ ಕೆಲಸ ಮಾಡಿದ್ದು ನನಗೆ ಖುಷಿ ಕೊಟ್ಟಿದೆ. ಅಷ್ಟೇ ಅಲ್ಲದೆ ತುಳು ನಾಡಿನ ಪರಿಸರ, ಆಹಾರ ಆತಿಥ್ಯ ಕೂಡ ನನಗೆ ತುಂಬಾ ಇಷ್ಟವಾಗಿದೆ. ಮುಂದೆಯೂ ಅವಕಾಶ ಸಿಕ್ಕರೆ ಕೋಸ್ಟಲ್ವುಡ್ನಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದು ಸಂಗೀತ ನಿರ್ದೇಶಕ ಮನೋಮೂರ್ತಿ ಹೇಳಿದ್ದಾರೆ.