ವಾಷಿಂಗ್ಟನ್(ಪಿಟಿಐ)- ಅಮೆರಿಕದ ಕ್ಯಾಲಿಫೋರ್ನಿಯಾದ ಉದ್ಯಾನವನವೊಂದರಲ್ಲಿ ಅಪರಿಚಿತ ದುಷ್ಕರ್ಮಿಗಳು ಮಹಾತ್ಮ ಗಾಂಧೀಜಿ ಪ್ರತಿಮೆಯನ್ನು ಮುರಿದು ಧ್ವಂಸಗೊಳಿಸಿದ್ದಾರೆ. ಘಟನೆಯ ಬಗ್ಗೆ ದೇಶಾದ್ಯಂತ ಭಾರತೀಯ ಅಮೆರಿಕನ್ನರು ಆಘಾತಕ್ಕೊಳಗಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ದ್ವೇಷದ ಅಪರಾಧ ಘಟನೆಯಾಗಿದ್ದು, ಕೂಡಲೇ ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
‘ಉತ್ತರ ಕ್ಯಾಲಿಫೋರ್ನಿಯಾದ ಡೇವಿಸ್ ನಗರದ ಸೆಂಟ್ರಲ್ ಪಾರ್ಕ್ನಲ್ಲಿರುವ ಗಾಂಧೀಜಿ ಅವರ 6 ಅಡಿ ಎತ್ತರದ, 294 ಕೆ.ಜಿ ತೂಕದ ಕಂಚಿನ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದ್ದು, ಪ್ರತಿಮೆಯ ಪಾದ ಮತ್ತು ಮುಖ ಭಾಗಕ್ಕೆ ಹಾನಿಯನ್ನುಂಟು ಮಾಡಲಾಗಿದೆ’ ಎಂದು ಸ್ಥಳೀಯ ಸುದ್ದಿ ಸಂಸ್ಥೆ ವರದಿ ಮಾಡಿದೆ. ‘ಸದ್ಯ ಈ ಪ್ರತಿಮೆಯನ್ನು ಅಲ್ಲಿಂದ ತೆಗೆಯಲಾಗಿದ್ದು, ಸುರಕ್ಷಿತ ಸ್ಥಳದಲ್ಲಿ ಇರಿಸಲಾಗಿದೆ’ ಎಂದು ಡೇವಿಸ್ ನಗರ ಸ್ಥಳೀಯ ಆಡಳಿತದ ಸದಸ್ಯ ಲೂಕಸ್ ಫ್ರೀರಿಚ್ಸ್ ಮಾಹಿತಿ ನೀಡಿದ್ದಾರೆ.
ವಾಷಿಂಗ್ಟನ್ ಡಿಸಿಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಅಮೆರಿಕ ಸರ್ಕಾರ ಸಮಗ್ರ ತನಿಖೆ ನಡೆಸಿ ದುಷ್ಕರ್ಮಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ. ಸಾನ್ ಫ್ರಾನ್ಸಿಸ್ಕೊದಲ್ಲಿರುವ ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾ ಪ್ರತ್ಯೇಕವಾಗಿ ಪ್ರಕರಣವನ್ನು ತೆಗೆದುಕೊಂಡು ಸಿಟಿ ಆಫ್ ಡೇವಿಸ್ ಮತ್ತು ಸ್ಥಳೀಯ ಜಾರಿ ನಿರ್ದೇಶನಾಲಯ ಅಧಿಕಾರಿಗಳೊಂದಿಗೆ ತನಿಖೆ ನಡೆಸಲು ಮುಂದಾಗಿದೆ.
ಗಾಂಧೀಜಿಯವರ ಪ್ರತಿಮೆಯನ್ನು ಅಪವಿತ್ರಗೊಳಿಸುವುದು ಇದೇ ಮೊದಲಲ್ಲ. 2020ರ ಡಿಸೆಂಬರ್ನಲ್ಲಿ ಖಲಿಸ್ತಾನಿ ಬೆಂಬಲಿಗರು ವಾಷಿಂಗ್ಟನ್ ಡಿಸಿಯಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಮುಂದೆ ಕೂಡ ಅಪವಿತ್ರಗೊಳಿಸಿದ್ದು ನೆನಪಿಸಿಕೊಳ್ಳಬಹುದು ಎಂದು ಪಿಟಿಐ ವರದಿಯಲ್ಲಿ ಹೇಳಿದೆ.