ಕುಂದಾಪುರ: ಇಲ್ಲಿನ ಅರಣ್ಯ ಇಲಾಖೆಯ ವಶದಲ್ಲಿದ್ದಂತಹ ವಾಹನ ಬಿಡುಗಡೆಗೆ ಸಂಬಂಧಿಸಿ ಲಂಚ ಸ್ವೀಕರಿಸುತ್ತಿದ್ದ ಕುಂದಾಪುರ ಅರಣ್ಯ ಇಲಾಖೆಯ ನೌಕರನೋರ್ವನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿಯವರ ಕಚೇರಿಯ ಕ್ಷೇಮಾಭಿವೃದ್ಧಿ ನೌಕರ ಬಿ.ಮಂಜುನಾಥ್ ಪೂಜಾರಿ. ಆಲೂರಿನ ಆದಿತ್ಯ ಎಂಬವರ ವಾಹನವು ಅರಣ್ಯ ಇಲಾಖೆ ವಶದಲ್ಲಿದ್ದು, ವಾಹನ ಬಿಡುಗಡೆಮಾಡಬೇಕಾದರೆ 15 ಸಾವಿರ ರೂ. ಲಂಚ ನೀಡುವಂತೆ ಮಂಜುನಾಥ್ ಪೂಜಾರಿ ಬೇಡಿಕೆ ಮುಂದಿಟ್ಟಿದ್ದರು.
ಲಂಚ ನೀಡಲು ಮುಂದಾಗದ ಆದಿತ್ಯ ಪ್ರಕರಣದ ಕುರಿತು ಉಡುಪಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದರು. ಅದರಂತೆಯೇ ಬಗ್ಗೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು, ಆದಿತ್ಯ ಅವರಿಂದ 15ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಸಂದರ್ಭ ಮಂಜುನಾಥ್ ಪೂಜಾರಿಯನ್ನು ಬಂಧಿಸಿದರು. ಲೋಕಾಯುಕ್ತ ಎಸ್ಪಿ ಸೈಮನ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಕೆ.ಸಿ.ಪ್ರಕಾಶ್ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರಾದ ಮಂಜುನಾಥ್ ಹಾಗೂ ರಫೀಕ್ ಮತ್ತು ಸಿಬ್ಬಂದಿಗಳಾದ ನಾಗೇಶ್ ಉಡುಪ, ನಾಗರಾಜ್, ರಾಘವೇಂದ್ರ, ರೋಹಿತ್, ಪ್ರಸನ್ನ ದೇವಾಡಿಗ, ಅಬ್ದುಲ್ ಜಲಾಲ್, ರವೀಂದ್ರ ಗಾಣಿಗ, ರಮೇಶ್, ಸೂರಜ್, ಸುಧೀರ್ ಈ ಕಾರ್ಯಾಚರಣೆ ನಡೆಸಿದ್ದಾರೆ.


