ಮಂಗಳೂರು: ವರ್ಷದಿಂದ ವರ್ಷಕ್ಕೆ ಏಡ್ಸ್ ರೋಗಿಗಳ ಸಂಖ್ಯೆ ಕಡಿಮೆಯಾಗುತ್ತ ಹೋಗುತ್ತಿದ್ದರೂ ಕೂಡ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ನೂ 10,431 ರೋಗಿಗಳು ಇದ್ದಾರೆ ಎನ್ನುವ ವಿಚಾರ ಸುದ್ದಿಗೋಷ್ಠಿಯಲ್ಲಿ ಪ್ರಕಟವಾಗಿದೆ. ಈ ವರ್ಷ ಏಪ್ರಿಲ್ನಿಂದ ಅಕ್ಟೋಬರ್ ವರೆಗೆ 209 ಪ್ರಕರಣಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ ಅವರು ಬುಧವಾರದಂದು ನಡೆದ ಪತ್ರಿಕಾಗೋಷ್ಠಿಯಲ್ಲಿ, ಡಿಸೆಂಬರ್ 1ರಂದು ಕಣಚೂರು ವೈದ್ಯಕೀಯ ಸಂಸ್ಥೆಯಲ್ಲಿ ನಡೆಯಲಿರುವ ಏಡ್ಸ್ ತಡೆ ದಿನಾಚರಣೆಯ ಬಗ್ಗೆ ಮಾಹಿತಿ ನೀಡಿ, ಈ ವಿವರ ಒದಗಿಸಿದರು.
ಇನ್ನು ಜಿಲ್ಲೆಯಲ್ಲಿ ಎಚ್ಐವಿ ಸೋಂಕು ತಡೆಗೆ ಸಂಬಂಧಿಸಿ 19 ಆಪ್ತ ಸಮಾಲೋಚನೆ ಮತ್ತು ಪರೀಕ್ಷಾ ಕೇಂದ್ರಗಳು, 3 ಎಆರ್ಟಿ ಕೇಂದ್ರಗಳಿದ್ದು 13 ಲಿಂಗ್ ಎಆರ್ಟಿ ಕೇಂದ್ರಗಳು ಇವೆ. 54 ರೆಡ್ ರಿಬ್ಬನ್ ಕ್ಲಬ್ಗಳು, 14 ರಕ್ತ ನಿಧಿ ಕೇಂದ್ರಗಳು ಮತ್ತು 3 ರಕ್ತ ಶೇಖರಣಾ ಘಟಕಗಳು ಇವೆ ಎಂದು ಡಾ.ತಿಮ್ಮಯ್ಯ ವಿವರಿಸಿದರು.
ಜಿಲ್ಲೆಯಲ್ಲಿ 2007-08ರ ಸಾಲಿನಲ್ಲಿ 1,169 ಎಚ್ಐವಿ ಪ್ರಕರಣಗಳು ಪತ್ತೆಯಾಗಿದ್ದವು. ಮುಂದಿನ ವರ್ಷ 1064 ಪ್ರಕರಣಗಳು ಇದ್ದವು. ನಂತರದ ವರ್ಷಗಳಲ್ಲಿ ಈ ಸಂಖ್ಯೆ ಮೂರಂಕಿಗೆ ಇಳಿಯಿತು. 2016-17ನೇ ಸಾಲಿನಲ್ಲಿ ಮೊದಲ ಬಾರಿ 600ಕ್ಕಿಂತ ಕಡಿಮೆ ಪ್ರಕರಣಗಳು ಪತ್ತೆಯಾದವು. ಕಳೆದ 5 ವರ್ಷಗಳಲ್ಲಿ 300ಕ್ಕಿಂತ ಕಡಿಮೆ ರೋಗಿಗಳು ಇದ್ದಾರೆ.
ಏಡ್ಸ್ ತಡೆ ದಿನಾಚರಣೆ ಅಂಗವಾಗಿ ಡಿಸೆಂಬರ್ 1ರಂದು ಬೆಳಿಗ್ಗೆ 7 ಗಂಟೆಗೆ ಬಾವುಟಗುಡ್ಡದಿಂದ ಎಸ್ಡಿಎಂ ಕಾನೂನು ಕಾಲೇಜಿನ ವರೆಗೆ ಜಾಥಾ ನಡೆಯಲಿದೆ. ಮೇಯರ್ ಸುಧೀರ್ ಶೆಟ್ಟಿ ಉದ್ಘಾಟಿಸುವರು. ದಿನಾಚರಣೆ ಕಾರ್ಯಕ್ರಮವನ್ನು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಉದ್ಘಾಟಿಸುವರು ಎಂದು ಅವರು ವಿವರಿಸಿದರು.
ಇನ್ನು 17 ವರ್ಷಗಳಲ್ಲಿ ಜಿಲ್ಲೆಯಲ್ಲಿ ಪರೀಕ್ಷೆಗೆ ಒಳಗಾದವರ ಸಂಖ್ಯೆ 7,49,494 ಎಂದು ತಿಳಿಸಿದ್ದಾರೆ.
ಜಿಲ್ಲಾ ಕ್ಷಯರೋಗ ಮತ್ತು ಏಡ್ಸ್ ನಿಯಂತ್ರಣಾಧಿಕಾರಿ ಡಾ.ಬದ್ರುದ್ದೀನ್ ಹಾಗೂ ಕಾರ್ಯಕ್ರಮ ಸಂಯೋಜಕ ಮಹೇಶ್ ಇದ್ದರು.